ಬಾಗಲಕೋಟೆ: ನಾನು ಹಿಂದು ಆದರೆ ಹಿಂದುತ್ವವನ್ನು ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ತಿರುಗೇಟು ನೀಡಿದ್ದಾರೆ.
ಹಿಂದು ಅಂದ ಮೇಲೆ ಹಿಂದುತ್ವವನ್ನು ಗೌರವಿಸಲೇಬೇಕು. ಹಿಂದುಗಳಲ್ಲಿ ಇರುವಂತಹದ್ದು ಹಿಂದುತ್ವ. ಹೀಗಾಗಿ ಹಿಂದೂಗಳೆಲ್ಲರೂ ಹಿಂದುತ್ವವನ್ನು ಗೌರವಿಸಲೇಬೇಕು ಎಂದು ಹೇಳಿರುವ ಮಂತ್ರಾಲಯ ಶ್ರೀಗಳು, ತಾಯಿ ಅಂದಮೇಲೆ ಅವಳಿಗೆ ನೀವು ಸಂತಾನ ಅಂತ ಆಯ್ತಲ್ಲ ಎಂದು ಸಿದ್ದರಾಮಯ್ಯಗೆ ತೀಕ್ಷ್ಣವಾಗಿ ಹೇಳಿದ್ದಾರೆ.
ನಾವು ಹಿಂದು ಎಂದ ಮೇಲೆ ಹಿಂದುತ್ವವನ್ನು ಗೌರವಿಸಲೇಬೇಕು. ಒಂದೇ ಕಡೆ ನನ್ನ ತಾಯಿ ಅನ್ನೋದು, ಅವಳು ನಿಸ್ಸಾಂತಾನ ಉಳ್ಳುವಳು ಅನ್ನೋದು ಎಷ್ಟು ಅಪಹಾಸ್ಯ. ತಾಯಿ ಅಂದಮೇಲೆ ಅವಳಿಗೆ ಸಂತಾನ ನೀನು ಅಂತಾ ಆಯಿತಲ್ವಾ? ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ದ್ವಂದ್ವ ಹೇಳಿಕೆಯಲ್ಲಿ ಅರ್ಥವಿಲ್ಲ. ಹಿಂದುತ್ವ ವಿಚಾರದಲ್ಲಿ ಅವರಿಗೆ ಸ್ವಲ್ಪ ಭೇದ ಇರಬಹುದು. ಅದನ್ನು ವಿಚಾರ ವಿನಿಮಯ ಮಾಡಿಕೊಂಡು ಪರಿಹರಿಸಿಕೊಳ್ಳುವುದು ಉತ್ತಮ. ಹಿಂದು ಎಂದು ಹೇಳಿಕೊಳ್ಳುತ್ತಾ ಹಿಂದುತ್ವ ವಿರೋಧಿಸುತ್ತೇನೆ ಎನ್ನುವುದು ಅರ್ಥಹೀನ ಎಂದು ಸ್ವಾಮೀಜಿ ಹೇಳಿದ್ದಾರೆ.