ಬೆಂಗಳೂರು: ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2023 ಸೋಮವಾರದಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ನಗರದ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಸಲೀಂ ಅವರು, ಸುಗಮ ಸಂಚಾರದ ಭರವಸಯನ್ನು ನೀಡಿದ್ದಾರೆ.
ನಗರದಲ್ಲಿ ಸಂಚಾರ ಸಮಸ್ಯೆ ನಿಭಾಯಿಸಲು ಸಂಚಾರಿ ಪೊಲೀಸರು ಸಂಪೂರ್ಣವಾಗಿ ಸಿದ್ಧರಾದಿದ್ದಾರೆ. ಈಗಾಗಲೇ ಸಾರ್ವಜನಿಕರಿಗೆ ಸಂಚಾರ ಸಲಹೆಯನ್ನು ನೀಡಿದ್ದೇವೆ. ಸುಗಮ ಪ್ರಯಾಣಕ್ಕಾಗಿ ಜನರು ಕೂಡ ಈ ಸಲಹೆಗಳನ್ನು ಪಾಲನೆ ಮಾಡಬೇಕಿದೆ. ಕಾರ್ಯಕ್ರಮಕ್ಕೆ ಬರುವವರು ಬೆಳಗ್ಗೆ 8.30ಕ್ಕೆ ಸ್ಥಳಕ್ಕೆ ತಲುಪಬೇಕಾಗಿರುವುದರಿಂದ ಸಂಚಾರ ನಿರ್ಬಂಧ ಬೆಳಗ್ಗೆ 6 ಗಂಟೆಯಿಂದಲೇ ಜಾರಿಯಲ್ಲಿರುತ್ತದೆ ಎಂದು ಸಲೀಂ ಅವರು ಹೇಳಿದ್ದಾರೆ.
ಎಸ್ಟೀಮ್ ಮಾಲ್ನಿಂದ ಬಳ್ಳಾರಿ ರಸ್ತೆಯ ಎಲಿವೇಟೆಡ್ ರಸ್ತೆಯನ್ನು ಬೆಳಿಗ್ಗೆ 8 ರಿಂದ 11.30 ರವರೆಗೆ ಎಲ್ಲಾ ರೀತಿಯ ವಾಹನಗಳಿಗೆ ಬಂದ್ ಮಾಡಲಾಗಿದೆ. ಏರೋ ಇಂಡಿಯಾಕ್ಕೆ ಮಾನ್ಯವಾದ ಹಾಗೂ ಪಾಸ್ಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರ ಅನುಮತಿಸಲಾಗುತ್ತಿದೆ. ಯಲಹಂಕ ಮತ್ತು ಅಕ್ಕಪಕ್ಕದ ಪ್ರದೇಶಗಳಿಗೆ ಹೋಗುವ ಜನರು ಎಲಿವೇಟೆಡ್ ರಸ್ತೆಯ ಕೆಳಗಿನ ಸರ್ವಿಸ್ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಏರೋ ಇಂಡಿಯಾ 2023ಕ್ಕೆ ಕ್ಷಣಗಣನೆ: 5 ದಿನಗಳ ಚಿತ್ತಾಕರ್ಷಕ ಪ್ರದರ್ಶನಕ್ಕಿಂದು ಪ್ರಧಾನಿ ಮೋದಿ ಚಾಲನೆ, ವಿಶ್ವೇಶ್ವರಯ್ಯಗೆ ಅರ್ಪಣೆ
"ಟ್ರಾಫಿಕ್ ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಕರ್ತವ್ಯ ನಿಭಾಯಿಸಲು ಸಿದ್ಧರಿದ್ದಾರೆ. ಉತ್ತಮ ನಿರ್ವಹಣೆಗೆ ಸಾರ್ವಜನಿಕರು ಕೂಡ ಸಹಕರಿಸಬೇಕಿದೆ. ಕಚೇರಿಗಳು ಮತ್ತು ಇತರ ಸ್ಥಳಗಳಿಗೆ ಹೋಗುವ ಜನರು ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳುವ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.
ಬಳ್ಳಾರಿ ರಸ್ತೆಯಲ್ಲಿ ಮೆಹಕ್ರಿ ಜಂಕ್ಷನ್ನಿಂದ ಎಂ.ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ವರೆಗೆ, ಗೊರಗುಂಟೆಪಾಳ್ಯದಿಂದ ಹೆಣ್ಣೂರು, ನಾಗವಾರ ಜಂಕ್ಷನ್ ನಿಂದ ಥಣಿಸಂದ್ರ ಮುಖ್ಯರಸ್ತೆ, ಬಾಗಲೂರು ಮುಖ್ಯರಸ್ತೆ ರೇವಾ ಕಾಲೇಜು ಜಂಕ್ಷನ್, ಬೆಂಗಳೂರು-ತುಮಕೂರು ರಸ್ತೆ ಗೊರಗುಂಟೆಪಾಳ್ಯ, ಹೆಸರಘಟ್ಟ ಮತ್ತು ಚಿಕ್ಕಬಾಣಾವದಿಂದ ನಗರದ ಕಡೆಗೆ ಸಾಗುವ ಎರಡೂ ಬದಿಗಳಲ್ಲಿಯೂ ಬೆಳಿಗ್ಗೆ 6 ರಿಂದ ರಾತ್ರಿ 8ಗಂಟೆಯವರೆಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳನ್ನು ಹೊರತುಪಡಿಸಿ ಲಾರಿಗಳು, ಟ್ರಕ್ಗಳು, ಖಾಸಗಿ ಬಸ್ಗಳು ಮತ್ತು ಎಲ್ಲಾ ರೀತಿಯ ಭಾರೀ ಮತ್ತು ಮಧ್ಯಮ ಸರಕುಗಳ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.