ರಾಮನಗರ: ವಿಧಾನಸಭೆ ಚುನಾವಣೆಗೆ ಮುನ್ನ ಫೆಬ್ರವರಿಯೊಳಗೆ ಬೆಂಗಳೂರು-ಮೈಸೂರು 10 ಪಥದ ಎಕ್ಸ್ಪ್ರೆಸ್ವೇ ಸಾರ್ವಜನಿಕರಿಗೆ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಮನಗರ ತಾಲೂಕು ಜೀಗೇನಹಳ್ಳಿಗೆ ಗುರುವಾರ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು ಹೆದ್ದಾರಿ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
170 ಕಿಮೀ ರಸ್ತೆಯ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡ ನಂತರ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರು ಮತ್ತು ಎಲ್ಲಾ ಪಾಲುದಾರರಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಬೆಂಗಳೂರು-ಚೆನ್ನೈ, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
9,000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 10 ಪಥಗಳ ಎಕ್ಸ್ಪ್ರೆಸ್ವೇ ರಾಮನಗರ-ಮಂಡ್ಯ-ಮೈಸೂರನ್ನು ಸಂಪರ್ಕಿಸುತ್ತದೆ ಮತ್ತು 53 ಕಿಮೀ ಉದ್ದದ ಹೊಸ ಬೈಪಾಸ್ ರಸ್ತೆಗಳನ್ನು ಹೊಂದಿರುತ್ತದೆ. ಒಮ್ಮೆ ಕಾಮಗಾರಿ ಪೂರ್ಣಗೊಂಡ ನಂತರ, ಇದು ಪ್ರಯಾಣದ ಸಮಯವನ್ನು 90 ನಿಮಿಷಗಳಿಗೆ ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ಈ ಯೋಜನೆ ರಾಜಕೀಯವಾಗಿ ಬಹಳ ಮಹತ್ವದ್ದಾಗಿದೆ, ಒಕ್ಕಲಿಗ ಭದ್ರಕೋಟೆಯಾಗಿರುವ ಹಳೆ ಮೈಸೂರು ಭಾಗದಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ.
ಗಡ್ಕರಿ ಅವರು ಮಂಡ್ಯ ಮತ್ತು ಮೈಸೂರು ಬಳಿಯ ಮೇಲ್ಸೇತುವೆ ಮತ್ತು ರಸ್ತೆಗಳ ಕಾಮಗಾರಿಯನ್ನು ನಿನ್ನೆ ಪರಿಶೀಲಿಸಿದರು.
ರಸ್ತೆಯಲ್ಲಿ ನೀರು ತುಂಬಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದನ್ನು ಉಲ್ಲೇಖಿಸಿದ ಮಾತನಾಡಿದ ಅವರು, ದೇಶದಲ್ಲಿ ಅಧಿಕ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಸಮಸ್ಯೆಯನ್ನು ಗಮನಿಸಿದೆ ಮತ್ತು ಅದನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ರಾಮನಗರದ ಮೂಲಕ ಹಸಿರು ಮಾರ್ಗದಲ್ಲಿ ಹಾದು ಹೋಗುವ ಹೆದ್ದಾರಿ ಶಿಕ್ಷಣ ಸಂಸ್ಥೆಗಳು ಮತ್ತು ಐಟಿ ಕಂಪನಿಗಳು ತಮ್ಮ ಉದ್ಯಮಗಳನ್ನು ಸ್ಥಾಪಿಸಲು ಆದ್ಯತೆಯ ತಾಣವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.
ತಾಂತ್ರಿಕ ಮತ್ತು ವಿನ್ಯಾಸ ತಂಡಗಳು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಪಘಾತ ವಲಯಗಳು ಮತ್ತು ತಿರುವುಗಳ ಬಳಿ ಫಲಕಗಳನ್ನು ಹಾಕಲು ಸ್ಥಳಗಳನ್ನು ಗುರುತಿಸುತ್ತಿವೆ. ಹೆಲಿಪ್ಯಾಡ್ಗಳು ಮತ್ತು ಏರ್ ಆಂಬ್ಯುಲೆನ್ಸ್ಗಳ ಸೌಲಭ್ಯಗಳನ್ನು ಕೂಡ ಪರಿಗಣಿಸಲಾಗುತ್ತಿದೆ, ಅಪಘಾತದ ಸಂದರ್ಭಗಳಲ್ಲಿ ಜನರನ್ನು ರಕ್ಷಿಸಲು ಎನ್'ಹೆಚ್ಎಐ ಕ್ರೇನ್ಗಳು ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುತ್ತದೆ. ಹೆದ್ದಾರಿಯಲ್ಲಿ ಟ್ರಾಮಾ ಸೆಂಟರ್ಗಳು ಮತ್ತು ಆಸ್ಪತ್ರೆಗಳನ್ನು ಪ್ರಾರಂಭಿಸಲು ಎನ್ಎಚ್ಎಐ ಯೋಜಿಸುತ್ತಿದೆ ಎಂದರು.
ಇದನ್ನೂ ಓದಿ: ಬೆಂಗಳೂರು ಮೈಸೂರು ದಶಪಥ ರಸ್ತೆಗೆ 'ಕಾವೇರಿ ಎಕ್ಸ್ಪ್ರೆಸ್ವೇ' ಎಂದು ಹೆಸರಿಡಲು ಗಡ್ಕರಿಗೆ ಪ್ರತಾಪ್ ಸಿಂಹ ಮನವಿ
ಇದೇ ವೇಳೆ ಎಕ್ಸ್ಪ್ರೆಸ್ ವೇ ಅವೈಜ್ಞಾನಿಕ ಎಂಬ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಿರ್ದಿಷ್ಟ ದೂರುಗಳು ಮತ್ತು ಲೋಪದೋಷಗಳಿದ್ದರೆ ಸಂಸದರ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಯೋಜನೆಯ ವೆಚ್ಚವನ್ನು 4,000 ಕೋಟಿ ರೂ.ಗಳಿಂದ 9,000 ಕೋಟಿ ರೂ.ಗೆ ಹೆಚ್ಚಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ವಿವಿಧ ಸಂಸದರು, ಶಾಸಕರು ಮತ್ತು ಸಾರ್ವಜನಿಕರಿಂದ ಅಂಡರ್ಪಾಸ್ಗಾಗಿ ಮನವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಯೋಜನೆಯ ವೆಚ್ಚ ಹೆಚ್ಚಾಗಿದೆ ಎಂದು ಹೇಳಿದರು.
''ನಾವು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಮತ್ತು ಶೂನ್ಯ ಭ್ರಷ್ಟಾಚಾರವನ್ನು ಕಾಯ್ದುಕೊಂಡು 50 ಲಕ್ಷ ಕೋಟಿ ರೂಪಾಯಿಗಳ ಹೆದ್ದಾರಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಪರಿಸರ ಇಲಾಖೆಯಿಂದ ಅನುಮತಿ ಪಡೆಯುವಲ್ಲಿ ವಿಳಂಬ ಮತ್ತು ಭೂಸ್ವಾಧೀನದಲ್ಲಿನ ಅಡೆತಡೆಗಳು ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿವೆ ಎಂದರು.
ಇದನ್ನೂ ಓದಿ: ಮೈಸೂರು-ಬೆಂಗಳೂರು ಹೆದ್ದಾರಿಗೆ ಒಡೆಯರ್ ಹೆಸರಿಡುವಂತೆ ಕೇಂದ್ರ ಸಚಿವರಿಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಪತ್ರ
ಇದೇ ವೇಳೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇಡುವ ವಿಚಾರವನ್ನು ಗಡ್ಕರಿ ತಳ್ಳಿಹಾಕಿದರು,
ರಾಷ್ಟ್ರೀಯ ಹೆದ್ದಾರಿಗಳಿಗೆ ವ್ಯಕ್ತಿಗಳ ಹೆಸರನ್ನು ಇಡುವ ಅಭ್ಯಾಸವಿಲ್ಲ. ಈ ಸಂಬಂಧ ಸಲ್ಲಿಕೆಯಾಗಿರುವ ಎಲ್ಲಾ ಮನವಿ ಪತ್ರಗಳನ್ನು ಪ್ರಧಾನಮಂತ್ರಿಗಳ ಕಚೇರಿಗೆ ರವಾನಿಸಲಾಗುವುದು ಎಂದರು.