ರಾಜ್ಯ

ದಲಿತ ಸಭಾಧ್ಯಕ್ಷನ ಮೇಲೆ ಪೇಪರ್ ಎಸೆದು ಬಿಜೆಪಿಗರು ನಿರ್ಲಜ್ಜತನ ತೋರಿದ್ದಾರೆ: ಶಾಸಕ ಶಿವಲಿಂಗೇಗೌಡ!

Vishwanath S

ಬೆಂಗಳೂರು: ಸದನದಲ್ಲಿಂದು ಧರಣಿ ನಡೆಸುವ ನೆಪದಲ್ಲಿ ಬಿಜೆಪಿ ಶಾಸಕರು ಬಜೆಟ್ ಪ್ರತಿಗಳನ್ನು ಹರಿದು ಸಭಾಧ್ಯಾಕ್ಷರ ಪೀಠದಲ್ಲಿ ಆಸೀನರಾಗಿದ್ದ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮೇಲೆ ಎಸೆದಿದ್ದನ್ನು ಶಾಸಕ ಕೆಎಂ ಶಿವಲಿಂಗೇಗೌಡ ತೀವ್ರವಾಗಿ ಖಂಡಿಸಿದ್ದಾರೆ.

ಒಬ್ಬ ದಲಿತ ಸಭಾಧ್ಯಕ್ಷನ ಮೇಲೆ ಹರಿದ ಪೇಪರ್ ಎಸೆಯವುದು ನಾಚಿಕೆಗೇಡಿನ ಸಂಗತಿ, ನಿರ್ಲಜ್ಜತೆ ಪ್ರದರ್ಶಿಸಿದ ಬಿಜೆಪಿ ಶಾಸಕರನ್ನು ಅಮಾನತು ಮಾಡಿ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಬೇಕು ಎಂದು ಹೇಳಿದರು.

ಸದನದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಬಿಜೆಪಿ ಶಾಸಕರಿಗೆ ಇದೆ ಆದರೆ ಈ ರೀತಿ ವರ್ತನೆ ಸರಿಯಲ್ಲ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.

ಸದನದಲ್ಲಿ ಅಗೌರವ ತೋರಿದ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಬಿಜೆಪಿಯ ಡಾ.ಅಶ್ವತ್ಥ್​​ ನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್.ಅಶೋಕ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ಮತ್ತು ಭರತ್ ಶೆಟ್ಟಿ ಅವರನ್ನು ಸ್ಪೀಕರ್ ಯುಟಿ ಖಾದರ್ ಅವರು ಅಮಾನತು ಮಾಡಿದ್ದಾರೆ. ಈ 10 ಸದಸ್ಯರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ.

ಅಧಿಕಾರಿಗಳ ದುರ್ಬಳಕೆ ಆರೋಪ
2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ಸಭೆ ನಡೆಸಿದ್ದ ಮೈತ್ರಿಕೂಟದ ಮುಖಂಡರ ಸೇವೆಗೆ ಕಾಂಗ್ರೆಸ್ ಸರ್ಕಾರ 30 ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.

SCROLL FOR NEXT