ಬೆಂಗಳೂರು: ಬೆಂಗಳೂರಿನ ಬಸ್ ಗ್ಯಾರೇಜ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ (Bengaluru fire)ದಲ್ಲಿ 20ಕ್ಕೂ ಹೆಚ್ಚು ಬಸ್ ಗಳು ಬೆಂಕಿಗಾಹುತಿಯಾಗಿದ್ದು, ಘಟನಾ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK ShivaKumar) ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರಿನ ಹೊಸಕೆರೆಹಳ್ಳಿಯ ವೀರಭದ್ರನಗರದ ಸಮೀಪದಲ್ಲಿರುವ SV ಕೋಚ್ ಬಸ್ ಬಾಡಿಬಿಲ್ಡರ್ಸ್ ಮತ್ತು ಗ್ಯಾರೇಜ್ ನಲ್ಲಿ ಇಂದು ಬೆಳಗ್ಗೆ ಭಾರೀ ಬೆಂಕಿ (Bus Fire) ಕಾಣಿಸಿಕೊಂಡು ನಿಂತಿದ್ದ 20ಕ್ಕೂ ಹೆಚ್ಚು ಬಸ್ಗಳು ಸುಟ್ಟು ಕರಕಲಾಗಿವೆ. ಗ್ಯಾರೇಜ್ನಲ್ಲಿ ನಿಂತಿದ್ದ ಬಸ್ ಒಂದರ ಭಾಗಕ್ಕೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ವರ್ಕ್ ಶಾಪ್ ನಲ್ಲಿ ಬೆಂಕಿ; ಹೊತ್ತಿ ಉರಿದ ಖಾಸಗಿ ಬಸ್ಗಳು! ವಿಡಿಯೋ
ಪ್ರಾಥಮಿಕ ತನಿಖೆಯ ಪ್ರಕಾರ, ವೆಲ್ಡಿಂಗ್ ಯಂತ್ರದಿಂದ ಕಿಡಿ ಹಾರಿದ್ದು ಇದು ಬೆಂಕಿ ಅವಘಡಕ್ಕೆ ಕಾರಣವಾಯಿತು. ಬಳಿಕ ಒಂದರನಂತರ ಒಂದು ಬಸ್ ಗೆ ಬೆಂಕಿ ವ್ಯಾಪಿಸಿದೆ ಎಂದು ನಾವು ಶಂಕಿಸಿದ್ದೇವೆ. ಬೆಂಕಿ ನಂತರ ಗ್ಯಾರೇಜ್ನಲ್ಲಿ ನಿಲ್ಲಿಸಲಾಗಿದ್ದ ಇತರ ಬಸ್ಗಳಿಗೆ ಹರಡಿ ಭಾರೀ ಹಾನಿಯನ್ನುಂಟುಮಾಡಿತು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಕಿಯನ್ನು ನಂದಿಸಲು ಹಲವಾರು ಅಗ್ನಿಶಾಮಕ ವಾಹನಗಳನ್ನು ಸೇವೆಗೆ ನಿಯೋಜಿಸಲಾಗಿತ್ತು. ಸುಮಾರು 18 ಬಸ್ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಮತ್ತು ನಾಲ್ಕು ಭಾಗಶಃ ಹಾನಿಗೊಳಗಾಗಿವೆ. ಗ್ಯಾರೇಜ್ನಲ್ಲಿ 35 ಬಸ್ಗಳಿದ್ದವು. ಈ ಪೈಕಿ 20ಕ್ಕೂ ಹೆಚ್ಚು ಬಸ್ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಗ್ಯಾರೇಜ್ ಅನ್ನು ತೆರೆದ ಜಾಗದಲ್ಲಿ ಇರಿಸಲಾಗಿದ್ದರಿಂದ ಬೆಂಕಿ ಕಾಣಿಸಿಕೊಂಡಾಗ ಅದರಲ್ಲಿದ್ದ ಜನರು ಬೇಗನೆ ಹೊರಬರಲು ಸಾಧ್ಯವಾಯಿತು. ಇದರಿಂದ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಬೆಂಕಿಯಲ್ಲಿ ಯಾರೂ ಗಾಯಗೊಂಡಿಲ್ಲ, ಬೆಂಕಿಯ ನಿಖರವಾದ ಕಾರಣವನ್ನು ತನಿಖೆ ಮಾಡಲು ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹುಲಿ ಉಗುರು ಪ್ರಕರಣ: ಪ್ರಚಾರಕ್ಕಾಗಿ ದಾಳಿ ಮಾಡಿದ್ರಾ? ನಟ ಜಗ್ಗೇಶ್ ಗೆ ನೀಡಿದ್ದ ನೋಟಿಸ್ ಗೆ ತಡೆ ನೀಡಿದ ಹೈಕೋರ್ಟ್
ಡಿಸಿಎಂ ಡಿಕೆ ಶಿವಕುಮಾರ್, ಸಚಿವ ರಾಮಲಿಂಗಾ ರೆಡ್ಡಿ ಭೇಟಿ
ಇನ್ನು ದುರಂತ ನಡೆದ ಗ್ಯಾರೇಜ್ ಗೆ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಬಳಿಕ ಆಧಿಕಾರಿಗಳೊಂದಿಗೆ ಘಟನೆಯ ಕುರಿತು ಮಾಹಿತಿ ಪಡೆದು, ಬಸ್ ಮಾಲೀಕರೊಂದಿಗೆ ನಷ್ಟದ ಕುರಿತು ಮಾಹಿತಿ ಪಡೆದರು.