ಬೆಳಗಾವಿ: ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ಆರಂಭವಾಗಲಿದ್ದು, ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ.
ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಸಂತಾಪ ಸೂಚನಾ ನಿರ್ಣಯ ಮಂಡನೆಯಾಗಲಿದ್ದು, ಕಳೆದ ಅಧಿವೇಶನದಿಂದ ಈಚೆಗೆ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಬಳಿಕ ಪ್ರಶ್ನೋತ್ತರ ಅವಧಿ ಕೈಗೆತ್ತಿಕೊಂಡು ಕಲಾಪ ಮುಂದೂಡಲಾಗುವುದು. ಮಧ್ಯಾಹ್ನ 3ಕ್ಕೆ ಕಲಾಪ ಸಲಹಾ ಸಮಿತಿ ಸಭೆ ನಡೆಸಿ ಮುಂದಿನ ಅಧಿವೇಶನದಲ್ಲಿ ಚರ್ಚೆಯಾಗಬೇಕಿರುವ ವಿಚಾರಗಳ ಬಗ್ಗೆ ಅಂತಿಮ ನಿರ್ಧಾರಿಸಲಾಗುವುದು ಎಂದು ವರದಿಗಳು ತಿಳಿಸಿವೆ.
ಇದಕ್ಕೂ ಮೊದಲು ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಚನ್ನಪಟ್ಟಣದ ಸಿಪಿ.ಯೋಗೇಶ್ವರ್, ಸಂಡೂರಿನ ಇ.ಅನ್ನಪೂರ್ಣ ಹಾಗೂ ಶಿಗ್ಗಾಂವಿಯ ಯೂಸುಫ್ ಖಾನ್ ಪಠಾನ್ ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಲಾದದ ವೇಳೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ, ವಕ್ಫ್ ವಿವಾದ, ವಾಲ್ಮೀಕಿ ನಿಗಮ ಹಗರಣ, ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರು ಹಾಗೂ ಶಿಶುಗಳ ಸಾವು, ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆಯಾಗುವ ಸಾಧ್ಯತೆಗಳಿದ್ದು, ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ತಂತ್ರ ರೂಪಿಸಿವೆ.
ಬಿಜೆಪಿ ಸಿದ್ಧವಾಗಿಟ್ಟುಕೊಂಡಿರುವ ಬಾಣಗಳಿಗೆ ಕಾಂಗ್ರೆಸ್ ನಾಯಕರು ಕೊರೋನಾ ಹಗರಣದ ಪ್ರತ್ಯಸ್ತ್ರ ಹೂಡಲು ಸನ್ನದ್ಧರಾಗಿದ್ದಾರೆ. ವಕ್ಫ್ ವಿಚಾರ ಮುಂದಿಟ್ಟರೆ, ಯತ್ನಾಳ್ ಪ್ರತ್ಯೇಕ ಹೋರಾಟ ಪ್ರಸ್ತಾಪಿಸಿ ತಿವಿಯುವ ಸಾಧ್ಯತೆ ಇದೆ.
ಇದನ್ನರಿತ ಬಿಜೆಪಿ ನಾಯಕರು ಯತ್ನಾಳ್ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಹೋರಾಡಲು ಕೌಂಟರ್ ಪ್ಲ್ಯಾನ್ ಮಾಡಿದ್ದಾರೆ. ಇದಕ್ಕೆ ಯತ್ನಾಳ್ ಕೂಡಾ ಜೈ ಎಂದಿದ್ದಾರೆ ಎನ್ನಲಾಗಿದೆ.
ನಮ್ಮ ಆಂತರಿಕ ಜಗಳ ಏನೇ ಇರಲಿ, ರಾಜ್ಯದ ಹಿತಾಸಕ್ತಿಗಾಗಿ ಆರ್ ಅಶೋಕ್ ನೇತೃತ್ವದಲ್ಲೇ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಯತ್ನಾಳ್ ಸದ್ಯ ತಮ್ಮ ಮಾತಿನ ಬಾಣವನ್ನು ಸರ್ಕಾರದತ್ತ ತಿರುಗಿಸಿದ್ದಾರೆ. ಸರ್ಕಾರದಲ್ಲಿ ಅಭಿವೃದ್ಧಿ ಕುಸಿದಿದೆ. ಇಡಿ.ದು ಏನಾದರೂ ಆದರೆ, ಸಿಎಂ ಸಿದ್ದರಾಮಯ್ಯರದ್ದು ಕೊನೆ ಅಧಿವೇಶನ ಆಗಬಹುದು ಎಂದಿದ್ದಾರೆ. ಇದಕ್ಕೆ ಸಚಿವ ಚಲುವರಾಯಸ್ವಾಮಿ ಕೌಂಟರ್ ಕೊಟ್ಟಿದ್ದು, ಯತ್ನಾಳ್ಗೆ ಪುರುಸೊತ್ತಿಲ್ಲ ಎಂದು ಕಾಲೆಳೆದಿದ್ದಾರೆ.
ಅನುಭವ ಮಂಟಪದ ಚಿತ್ರಕಲೆ
ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ 12ನೇ ಶತಮಾನದ ಸುಧಾರಕ ಬಸವಣ್ಣ ಅವರು ಸ್ಥಾಪಿಸಿದ ಅನುಭವ ಮಂಟಪದ ಬೃಹತ್ ವರ್ಣಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಲಿದ್ದಾರೆ.
ಮೈಸೂರಿನ ದಸರಾ ಹಬ್ಬದಂತೆಯೇ ಬೆಳಗಾವಿಯ ಪ್ರಮುಖ 30 ವೃತ್ತಗಳಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸಲು ಬೆಳಗಾವಿ ಜಿಲ್ಲಾಡಳಿತ ನಿರ್ಧರಿಸಿದ್ದು, ಸುವರ್ಣಸೌಧದ ಬಳಿ ಸ್ಥಾಪಿಸಲಾಗಿರುವ ವಿಶಿಷ್ಟ ವಿಜ್ಞಾನ ಉದ್ಯಾನವನವನ್ನೂ ಕೂಡ ಸಿಎಂ ಉದ್ಘಾಟಿಸಲಿದ್ದಾರೆ.
ವಿಶೇಷ ವಿಮಾನ
ಬೆಂಗಳೂರಿನಿಂದ ಅಧಿವೇಶನಕ್ಕೆ ಆಗಮಿಸುವ ಅತಿಥಿಗಳ ಅನುಕೂಲಕ್ಕಾಗಿ ಇಂಡಿಗೋ ಡಿಸೆಂಬರ್ 9 ರಿಂದ 19 ರವರೆಗೆ ಬೆಳಗ್ಗಿನ ಸಮಯದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ A320 ವಿಶೇಷ ವಿಮಾನ ಸಂಚಾರ ಕಲ್ಪಿಸಿದೆ.
ಬೆಂಗಳೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಡುವ ಈ ವಿಮಾನ ಬೆಳಗ್ಗೆ 7 ಗಂಟೆಗೆ ಬೆಳಗಾವಿ ತಲುಪಲಿದೆ. ಬೆಳಗ್ಗೆ 7.30ಕ್ಕೆ ಬೆಳಗಾವಿಯಿಂದ ಹೊರಟು 8.30ಕ್ಕೆ ಬೆಂಗಳೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.