ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಜೊತೆಗಿಕುವ ಅಕ್ಷತಾ ಮೂರ್ತಿ
ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಜೊತೆಗಿಕುವ ಅಕ್ಷತಾ ಮೂರ್ತಿ 
ರಾಜ್ಯ

ಬೆಂಗಳೂರು ಸುತ್ತಾಡಿದ ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ: ಸರಳತೆಗೆ ವ್ಯಾಪಕ ಮೆಚ್ಚುಗೆ, ಭದ್ರತೆ ಬಗ್ಗೆ ನೆಟ್ಟಿಗರ ಕಳವಳ

Manjula VN

ಬೆಂಗಳೂರು: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ, ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದು, ಈ ವೇಳೆ ಪುಸ್ಕತ ಮೇಳವೊಂದರಲ್ಲಿ ಸಾಮಾನ್ಯ ಮಹಿಳೆಯಂತೆ ಪುಸ್ತಕಗಳ ಹುಡುಕಾಟ ನಡೆಸಿದ್ದಕ್ಕೆ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗಿದ್ದವು. ಈ ಕುರಿತ ವಿಡಿಯೋಗಳೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ, ಇದರ ಜೊತೆ ಜೊತೆಗೆ ನೆಟ್ಟಿಗರು ಅಕ್ಷತಾ ಅವರ ಭದ್ರತೆ ಬಗ್ಗೆಯೂ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಅಕ್ಷತಾ ಮೂರ್ತಿ ಅವರು ಬ್ರಿಟನ್‌ನ ಪ್ರಥಮ ಮಹಿಳೆಯಾಗಿರುವ ಹಿನ್ನೆಲೆಯಲ್ಲಿ ಅವರ ಭದ್ರತೆ ಕುರಿತು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರ ನಿರ್ದೇಶನ ನೀಡಿದರೆ ಮಾತ್ರವೇ ಭದ್ರತೆ ಬಗ್ಗೆ ವ್ಯವಸ್ಥೆಗಳನ್ನು ಕಲ್ಪಿಸಬಹುದು ಎಂದು ನಗರ ಪೊಲೀಸರು ಹೇಳಿದ್ದಾರೆ.

ಅಕ್ಷತಾ ಅವರು ಬೆಂಗಳೂರಿನ ರಾಘವೇಂದ್ರ ಮಠದ ರಸ್ತೆಯಲ್ಲಿ ಕುಟುಂಬ ಸಮೇತರಾಗಿ ಪುಸ್ತಕ ಮೇಳವೊಂದಕ್ಕೆ ಭೇಟಿ ನೀಡಿದ್ದು, ಪುಸ್ತಕಗಳಿಗಾಗಿ ಹುಡುಕಾಟ ನಡೆಸುತ್ತಿರುವ ವಿಡಿಯೋ ಹಾಗೂ ಜಯನಗರದಲ್ಲಿ ತಂದೆ ನಾರಾಯಣಮೂರ್ತಿಯವರೊಂದಿಗೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೋಮವಾರ ಈ ವಿಡಿಯೋ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋ ಹಾಗೂ ಫೋಟೋವನ್ನು ಸಾವಿರಾರು ಜನರು ವೀಕ್ಷಣೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೆಲವರು ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಕ್ಷತಾ ಅವರಿಗೆ ವಿವಿಐಪಿ ವ್ಯವಸ್ಥೆಗಳನ್ನು ಕಲ್ಪಿಸಬೇಕಿತ್ತು ಎಂದು ಹೇಳಿದ್ದಾರೆ.

ಅಕ್ಷತಾ ಅವರಿಗೆ ಭಾರತ ಅಥವಾ ಬ್ರಿಟನ್ ಯಾವ ರಾಷ್ಟ್ರ ಭದ್ರತೆ ಒದಗಿಸುತ್ತದೆ? ಇದು ವೈಯಕ್ತಿಕ ಭೇಟಿಯಾಗಿರುವುದರಿಂದ ಭಾರತ ಭದ್ರತೆ ನೀಡಲು ಸಾಧ್ಯವಿಲ್ಲ. ಇಂತಹ ಭೇಟಿಗೆ ಬ್ರಿಟನ್ ಕೂಡ ಭದ್ರತೆಗೆ ಆದ್ಯತೆ ನೀಡುವುದಿಲ್ಲ ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.

ಭದ್ರತೆ ಲೋಪ ಬೇಜವಾಬ್ದಾರಿಯುತವಾದದ್ದು. ಅಕ್ಷತಾ ಅವರಿಗೆ ಏನಾದರೂ ಆಗಿದ್ದರೆ, ಭಾರತೀಯ ರಾಯಭಾರ ಕಚೇರಿ ಹೊಣೆ ಹೊರಬೇಕಾಗುತ್ತದೆ ಎಂದು ಮತ್ತೊಬ್ಬ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ.

ತಂದೆ ಮತ್ತು ಮಗಳ ಜೋಡಿ ಸರಳ ಹಾಗೂ ಸೊಗಸಾಗಿ ಕಾಣುತ್ತಿದೆ. ಆದರೆ, ಸುತ್ತಲೂ ಭದ್ರತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಭದ್ರತೆ ನೀಡಬೇಕಿತ್ತು. ಕ್ಯಾಮೆರಾ ಫ್ರೇಮ್ ಹೊರಗೆ ಭದ್ರತಾ ಸಿಬ್ಬಂದಿ ಇದ್ದಾರೆಂದು ಭಾವಿಸುತ್ತೇನೆಂದು ಮತ್ತೊಬ್ಬರು ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಸರ್ಕಾರದ ಸೂಚನೆಗಳ ಆಧಾರದ ಮೇಲಷ್ಟೇ ಭದ್ರತೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಅಕ್ಷತಾ ಅವರು ವೈಯಕ್ತಿಕವಾಗಿ ನಗರಕ್ಕೆ ಭೇಟಿ ನೀಡಿದ್ದು, ಅಧಿಕೃತವಾಗಿ ಭೇಟಿ ನೀಡಿರಲಿಲ್ಲ. ಅಧಿಕೃತ ಭೇಟಿಯಲ್ಲಿದ್ದರೆ ಭದ್ರತೆಯು ವಿಭಿನ್ನವಾಗಿರುತ್ತಿತ್ತು. ಆದಾಗ್ಯೂ, ಭದ್ರತಾ ನಿಯಮಗಳು ಸರ್ಕಾರದ ನಿರ್ದೇಶನಗಳು ಮತ್ತು ಕೇಂದ್ರ ಸಂಸ್ಥೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT