ಬೆಂಗಳೂರು: ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿದ್ದ ವೇದಿಕೆಯಲ್ಲೇ ಹೈಡ್ರಾಮಾ ನಡೆದಿದ್ದು, ಬಿಜೆಪಿ ಶಾಸಕ ಮುನಿರತ್ನ ಆರ್ ಎಸ್ ಎಸ್ ಸಮವಸ್ತ್ರ ಧರಿಸಿ ಪ್ರತಿಭಟನೆ ನಡೆಸಿರುವ ಘಟನೆ ವರದಿಯಾಗಿದೆ.
ಬೆಂಗಳೂರು ನಡಿಗೆ ಕಾರ್ಯಕ್ರಮದ ಪ್ರಯುಕ್ತ ನಿನ್ನೆ ಲಾಲ್ಬಾಗ್ಗೆ ತೆರಳಿದ್ದ ಡಿಕೆ ಶಿವಕುಮಾರ್ ಇಂದು ಮತ್ತಿಕೆರೆಯ ಜೆಪಿ ಪಾರ್ಕ್ನಲ್ಲಿ ಜನರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಜೆಪಿ ಪಾರ್ಕ್ನಲ್ಲಿ ಹೈಡ್ರಾಮಾ ನಡೆದಿದ್ದು, ಆರ್ಎಸ್ಎಸ್ ಡ್ರೆಸ್, ಟೋಪಿ ಧರಿಸಿ ಜೆಪಿ ಪಾರ್ಕ್ಗೆ ಬಂದ ಬಿಜೆಪಿ ಶಾಸಕ ಮುನಿರತ್ನ ಧರಣಿ ನಡೆಸಿದ್ದಾರೆ.
ವೇದಿಕೆಗೆ ಬಂದ ಮುನಿರತ್ನ ಅವರನ್ನು ಡಿಕೆ ಶಿವಕುಮಾರ್ ನಿರ್ಲಕ್ಷ್ಯಿಸಿದರು. ಡಿಕೆಶಿ ವೇದಿಕೆಯಲ್ಲಿ ಕುಳಿತಾಗಲೂ ಶಾಸಕ ಮುನಿರತ್ನ ಕೆಳಗೆ ಜನರ ಮಧ್ಯೆ ಕುರ್ಚಿಯಲ್ಲಿ ಕುಳಿತರು. ಆಗ ಡಿಸಿಎಂ ‘ಹೇಯ್, ಕಪ್ಪು ಟೋಪಿ ಎಂಎಲ್ಎ ಬಾರಯ್ಯ’ ಎಂದು ಕರೆದರು. ಆದರೆ, ಅದಕ್ಕೆ ಒಪ್ಪದ ಮುನಿರತ್ನ ‘ನಾನು ಜನರ ಮಧ್ಯದಲ್ಲೇ ಕೂರುತ್ತೇನೆ’ ಎಂದು ಹೇಳಿದರು.
ಆಹ್ವಾನವಿಲ್ಲ.. ಫೋಟೋ ಕೂಡ ಇಲ್ಲ: ಮುನಿರತ್ನ ಆಕ್ರೋಶ
ಇದಾದ ನಂತರ ಇದ್ದಕ್ಕಿದ್ದಂತೆ ಎದ್ದು ನಿಂತು ಡಿಕೆ ಶಿವಕುಮಾರ್ ಅವರ ವಿರುದ್ಧ ಮುನಿರತ್ನ ಪ್ರತಿಭಟನೆ ನಡೆಸಿದರು. ಬೆಂಗಳೂರು ನಡಿಗೆ ಸರ್ಕಾರದ ಕಾರ್ಯಕ್ರಮವಾದರೂ ಶಾಸಕನಾದ ನನಗೆ ಆಹ್ವಾನ ನೀಡದೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು. 'ಈ ಕಾರ್ಯಕ್ರಮದಲ್ಲೆಲ್ಲೂ ಶಾಸಕನ ಒಂದು ಫೋಟೋ ಕೂಡ ಹಾಕಿಲ್ಲ, ನನಗೆ ಆಹ್ವಾನ ನೀಡಿಲ್ಲ" ಎಂದು ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರದ ಕಾರ್ಯಕ್ರಮಕ್ಕೆ ಸಂಸದರು, ಶಾಸಕರಿಗೆ ಆಹ್ವಾನ ನೀಡದಿರುವುದು ತಪ್ಪು. ಸರ್ಕಾರದ ಕಾರ್ಯಕ್ರಮದಲ್ಲಿ ಸಂಸದ, ಶಾಸಕರ ಫೋಟೋ ಇಲ್ಲ. ಇದು ಸಾರ್ವಜನಿಕ ಕಾರ್ಯಕ್ರಮ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮ’ ಎಂದು ಮುನಿರತ್ನ ಆರೋಪಿಸಿದ್ದರು.
ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಜಟಾಪಟಿ
ಈ ವೇಳೆ ಮಧ್ಯಪ್ರವೇಶಿಸಿದ ಮುನಿರತ್ನ ಬೆಂಬಲಿಗರು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ವೇದಿಕೆಯಲ್ಲೇ ಗಲಾಟೆ ನಡೆಸಿದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರಿಂದಾಗಿ ಹೈಡ್ರಾಮಾ ಸೃಷ್ಟಿಯಾಯಿತು. ರಾಜಕೀಯ ಮಾಡಲು ಇಲ್ಲಿಗೆ ಬರಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಬೆಂಬಲಿಗರಿಗೆ ಎಚ್ಚರಿಕೆ ನೀಡಿದರು. ಕಾರ್ಯಕರ್ತರು ಪರಸ್ಪರ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ರೇಪಿಸ್ಟ್ ಮುನಿರತ್ನ ಎಂದ ಕಾಂಗ್ರೆಸ್ ಕಾರ್ಯಕರ್ತರು
ಇದೇ ವೇಳೆ ಮುನಿರತ್ನ ಮತ್ತು ಅವರ ಬೆಂಬಲಿಗರ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಕಾರ್ಯಕರ್ತರು, ‘ರೇಪಿಸ್ಟ್ ಮುನಿರತ್ನ’ ಎಂದು ಟೀಕಿಸಿದರು. ಈ ವೇಳೆ ಗಲಾಟೆ ಹೆಚ್ಚಾಗುತ್ತಿದ್ದಂತೆ ಮುನಿರತ್ನ ಅವರನ್ನು ಪೊಲೀಸರು ಜೆಪಿ ಪಾರ್ಕ್ನಿಂದ ಕರೆದೊಯ್ದರು.