ನವದೆಹಲಿ: ಕರ್ನಾಟಕ ಸರ್ಕಾರ ದಸರಾ ಹಬ್ಬದಲ್ಲಿ ಬೆಂಗಳೂರು - ಮೈಸೂರು ಪ್ರಯಾಣಿಕರಿಗೆ ಪ್ರಯಾಣ ದರ ಹೆಚ್ಚಿಸುವ ಮೂಲಕ "ಮಹಿಷಾಸುರ ಟ್ಯಾಕ್ಷ್" ಹಾಕಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ʼಬೆಂಗಳೂರು-ಮೈಸೂರುʼ ಬಸ್ ಪ್ರಯಾಣ ದರ ಹೆಚ್ಚಿಸಿ ಜನರ ಪಾಲಿಗೆ ʼಮಹಿಷಾಸುರʼ ಸರ್ಕಾರವಾಗಿದೆ. ಈಗಾಗಲೇ 48ಕ್ಕೂ ಹೆಚ್ಚು ವಸ್ತುಗಳ ಬೆಲೆ ಹೆಚ್ಚಿಸಿದೆ. ಇದೀಗ ದಸರಾ ಹಬ್ಬಕ್ಕೂ ಮೊದಲೇ ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರವನ್ನೂ ಬರೋಬ್ಬರಿ ₹20-30 ಹೆಚ್ಚಿಸುವ ಮೂಲಕ ಜನಸಾಮಾನ್ಯರನ್ನು ಕಿತ್ತು ತಿನ್ನುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ರೀತಿ ಹಗಲು ದರೋಡೆಗೆ ಇಳಿದಿದೆ. ದುರಾಡಳಿತದ ಪರಮಾವಧಿ ಎಲ್ಲೆ ಮೀರಿದೆ. ಭರವಸೆಗಳನ್ನು ನಂಬಿ ಅಧಿಕಾರ ಕೊಟ್ಟ ಶ್ರೀಸಾಮಾನ್ಯರು ಇದೀಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು GST ತಗ್ಗಿಸಿ ಪ್ರತಿಯೊಂದು ವಸ್ತುಗಳ ಬೆಲೆ ಇಳಿಕೆಗೆ ಕ್ರಮ ಕೈಗೊಂಡಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ಒಂದಿಲ್ಲೊಂದು ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರನ್ನು ಗೋಳು ಹೋಯ್ದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಸಾಮಾನ್ಯರ ಏಳಿಗೆ ಬಯಸಿ GST ಇಳಿಸಿದರು. ತರುವಾಯ ಪ್ರತಿಯೊಂದು ವಸ್ತುಗಳನ್ನೂ ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಆದರೆ, ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ಜನರನ್ನು ಬೆಲೆ ಏರಿಕೆಯಿಂದ ಬೀದಿಗೆ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.