ಮಂಡ್ಯ: ಮೈಸೂರು ಮತ್ತು ಬೆಂಗಳೂರು ನಡುವಿನ ರೈಲು ಸಂಪರ್ಕಕ್ಕೆ ಗಮನಾರ್ಹ ಉತ್ತೇಜನ ನೀಡುವ ನಿಟ್ಟಿನಲ್ಲಿ, ಈ ರೈಲ್ವೆ ಕಾರಿಡಾರ್ನಲ್ಲಿ ಕಾರ್ಯನಿರ್ವಹಿಸುವ ರೈಲುಗಳು ಶೀಘ್ರದಲ್ಲೇ ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸಲಿದ್ದು, ಎರಡೂ ನಗರಗಳ ನಡುವಿನ ಒಟ್ಟಾರೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.
ಬೆಂಗಳೂರು - ಮೈಸೂರು ನಡುವಿನ ರೈಲು ಮಾರ್ಗ, ರೈಲ್ವೆ ನಿಲ್ದಾಣಗಳಲ್ಲಿ ಕೇಂದ್ರ ಸಚಿವರಾದ ಸೋಮಣ್ಣ ಹಾಗೂ ಕುಮಾರಸ್ವಾಮಿ ಪರಿಶೀಲಿಸಿದರು. ಇದಕ್ಕೂ ಮೊದಲು, ಈ ಮಾರ್ಗದಲ್ಲಿ ರೈಲುಗಳು ಗಂಟೆಗೆ ಗರಿಷ್ಠ 110 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದವು.
ಈ ವೇಳೆ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸೋಮಣ್ಣ ಅವರು, ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಕನಕಪುರ-ಮಳವಳ್ಳಿ ರೈಲ್ವೆ ಮಾರ್ಗ ಪ್ರಾಜೆಕ್ಟ್ ತೆಗೆದುಕೊಂಡೆ, ಆದರೆ ಸಿಎಂ ಸಿದ್ದರಾಮಯ್ಯ ನಮ್ಮತ್ರ ದುಡ್ಡಿಲ್ಲ ಪ್ರಾಜೆಕ್ಟ್ ಬೇಡ ಎಂದು ಪತ್ರ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಾಮಾನ್ಯ ಜನರಿಗೆ ತೊಂದರೆ ಆಗದ ರೀತಿಯಲ್ಲಿ ರೈಲ್ವೆ ನಿಲ್ದಾಣ ಪರಿಶೀಲನೆ ಮಾಡಲಾಗುತ್ತಿದೆ. ಮಂಡ್ಯ ನಗರಕ್ಕೆ ಬಸ್ ಗಳ ವ್ಯವಸ್ಥೆ, ಮೆಮೊಟ್ರೈನ್ ಕೊಡಲು ಬೇಡಿಕೆ ಇದೆ. ಮಂಡ್ಯ ರೈಲ್ವೆ ನಿಲ್ದಾಣ ಅಭಿವೃದ್ಧಿ ಗೆ ನರೇಂದ್ರ ಮೋದಿ ಅವರು 25 ಕೋಟಿ ಕೊಟ್ಟಿದ್ದಾರೆ. ಮೈಸೂರು ಟೂ ಬೆಂಗಳೂರು ರೈಲ್ವೆ ಮಾರ್ಗದಲ್ಲಿ ಜನರಿಗೆ ತೊಂದರೆ ಆಗಿರುವ ಬಗ್ಗೆ ಮಾಹಿತಿ ಇದೆ.
ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ರಮ ಕೈಗೊಳ್ಳುತ್ತೇನೆ. ಕುಮಾರಸ್ವಾಮಿ ಅವರ ಜೊತೆ ಚರ್ಚೆ ಮಾಡಿದ್ದೇವೆ, ಕುಮಾರಸ್ವಾಮಿ ಅವರು ನಿಮ್ಮ ಕನಸು ನನಸು ಮಾಡ್ತಾರೆ. ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಕನಕಪುರ ರೈಲ್ವೆ ಮಾರ್ಗ ಪ್ರಾಜೆಕ್ಟ್ ತಕೊಂಡೆ. ಸಿದ್ದರಾಮಯ್ಯ ನಮ್ಮತ್ರ ದುಡ್ಡಿಲ್ಲ ಪ್ರಾಜೆಕ್ಟ್ ಬೇಡ ಅಂತ ಪತ್ರ ಬರೆದಿದ್ದಾರೆ. ಆದರೆ ನಾವು ನಿಮ್ಮ ಸಮಸ್ಯೆ ಸರಿಪಡಿಸುವ ಕೆಲಸ ಮಾಡ್ತೇವೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ರಾಜ್ಯದ ಕಾಂಗ್ರೆಸ್ ಸರಕಾರ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಅಸಹಕಾರ ತೋರುತ್ತಿದೆ. ಈ ಹಿಂದೆ ಕೇಂದ್ರ-ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ರೈಲ್ವೆ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿತ್ತು. ರಾಜ್ಯ ಸರಕಾರ ಭೂ ಸ್ವಾಧೀನಪಡಿಸಿಕೊಟ್ಟರೆ ಕೇಂದ್ರ ರೈಲ್ವೆ ಇಲಾಖೆ ಕಾಮಗಾರಿ ಆರಂಭಿಸುತ್ತಿತ್ತು. ಈಗಿನ ಸರಕಾರ ಸಹಕಾರವನ್ನೇ ಕೊಡುತ್ತಿಲ್ಲ ಎಂದರು.
ಬೆಂಗಳೂರು-ಚಾಮರಾಜನಗರ ರೈಲ್ವೆ ಯೋಜನೆ ನಮ್ಮಿಂದ ಆಗುವುದಿಲ್ಲ ಎಂದು ರಾಜ್ಯ ಸರಕಾರ ಪತ್ರ ಬರೆದಿದೆ. ಮೈಸೂರು-ಕುಶಾಲನಗರ ಯೋಜನೆಗೂ ಬೆಂಬಲ ನೀಡುತ್ತಿಲ್ಲ. ರಾಜ್ಯ ಸರಕಾರ ಸಹಕಾರ ನೀಡಿದರೆ ಈ ಎರಡೂ ಯೋಜನೆಗಳ ಅನುಷ್ಠಾನಕ್ಕೆ ಬದ್ಧವಾಗಿರುವುದಾಗಿ ಸೋಮಣ್ಣ ಹೇಳಿದರು.