ಬೆಂಗಳೂರು : ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಬಹುಕ್ರೀಡಾ ಸಮುಚ್ಚಯ ನಿರ್ಮಾಣ ಪ್ರಕ್ರಿಯೆಗೆ ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) ಅಧಿಕೃತವಾಗಿ ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿದೆ.
ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತದ ನಂತರ, ಕೆಎಚ್ಬಿ ಚಿನ್ನಸ್ವಾಮಿ ಸ್ಟೇಡಿಯಂ ಮೇಲಿನ ಒತ್ತಡ ಕಡಿಮೆ ಮಾಡುವುದು ಮತ್ತು ಆನೇಕಲ್ ಭಾಗದಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಪಡಿಸುವ ದೂರದೃಷ್ಟಿಯೊಂದಿಗೆ ಇಂಡ್ಲವಾಡಿಯಲ್ಲಿ ಬಹುಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಸರಕಾರ ನಿರ್ಧರಿಸಿತು.
ಈ ನಿಟ್ಟಿನಲ್ಲಿ ಆನೇಕಲ್ ತಾಲೂಕಿನ ಇಂಡ್ಲವಾಡಿಯ ಸೂರ್ಯನಗರ 4 ನೇ ಹಂತದ ಬಡಾವಣೆಯ 75 ಎಕರೆ ಪ್ರದೇಶದಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಸ್ಟೇಡಿಯಂ ಸೇರಿದಂತೆ ಅತ್ಯಾಧುನಿಕ ಅಂತಾರಾಷ್ಟ್ರೀಯ ಬಹುಕ್ರೀಡಾ ಸಮುಚ್ಚಯ ನಿರ್ಮಾಣ ಮಾಡುವ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಇದಕ್ಕೆ ರಾಜ್ಯ ಸರಕಾರ 2025 ರಲ್ಲಿ ಆಗಸ್ಟ್ನಲ್ಲಿ ಅನುಮತಿ ನೀಡಿತ್ತು. ಅಲ್ಲದೆ, ಪ್ರಸಕ್ತ ವರ್ಷದ ಬಜೆಟ್ನಲ್ಲಿಯೂ ಯೋಜನೆಯ ಅನುಷ್ಠಾನವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಯೋಜನಾ ಪ್ರಕ್ರಿಯೆ ಶುರು ಮಾಡಿದೆ.
ಕ್ರಿಕೆಟ್ ಸ್ಟೇಡಿಯಂ, ಬ್ಯಾಡ್ಮಿಂಟನ್, ಬಾಸ್ಕೆಟ್ಬಾಲ್, ಪುಟ್ಬಾಲ್, ಹಾಕಿ, ಟೆನ್ನಿಸ್, ವಾಲಿಬಾಲ್, ಸ್ವಿಮ್ಮಿಂಗ್, ಟೇಬಲ್ ಟೆನ್ನಿಸ್, ಅಥ್ಲೆಟಿಕ್ಸ್, ಹ್ಯಾಂಡ್ಬಾಲ್, ಖೋ-ಖೋ, ಕಧಿಬಡ್ಡಿ, ಕರಾಟೆ, ವರ್ಸಟೈಲಿಂಗ್, ವೇಟ್ ಲಿಫ್ಟಿಂಗ್, ಜುಡೋ ಸೇರಿದಂತೆ ಎಲ್ಲ ಒಳಾಂಗಣ, ಹೊರಾಂಗಣ ಕ್ರೀಡೆಗಳಿಗೆ ಅನುಕೂಲಕರವಾದ ಸೌಲಭ್ಯ, ವಸತಿ, ಪಾರ್ಕಿಂಗ್, ಜಿಮ್…, ಈಜುಕೊಳ, ಅತಿಥಿ ಗೃಹಗಳು, ಹಾಸ್ಟೆಲ್ಗಳು ಮತ್ತು ಹೋಟೆಲ್ಗಳೂ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಬಹುಕ್ರೀಡಾ ಸಮುಚ್ಚಯ ನಿರ್ಮಾಣ 75 ಎಕರೆಯಲ್ಲಿ ಸುಮಾರು 1,980 ಕೋಟಿ ರೂ.ವೆಚ್ಚದಲ್ಲಿ ಒಂದೇ ಹಂತದಲ್ಲಿ ನಿರ್ಮಿಸಲು ಮೊದಲ ಯೋಜಿಸಲಾಗಿತ್ತು.
ಆದರೆ, ಒಂದೇ ಹಂತದಲ್ಲಿ ನಿರ್ಮಾಣ ಕಷ್ಟ ಹಾಗೂ ವಿಳಂಬವಾಗಲಿದೆ. ಮೊದಲ ಹಂತದಲ್ಲಿಸುಮಾರು 1,000 ಕೋಟಿ ರೂ.ಅಂದಾಜು ವೆಚ್ಚದಲ್ಲಿ80,000 ಆಸನ ಸಾಮರ್ಥ್ಯದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ನಿರ್ಧರಿಸಿ, ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.