ತುಮಕೂರು ನಗರದಲ್ಲಿ ಸಾರ್ವಜನಿಕ ಉಪಯೋಗ ಸೇವೆಗೆ ಮೀಸಲಿದ್ದ ಎರಡು ಎಕರೆ ಸರ್ಕಾರಿ ಭೂಮಿಯನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪದ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL) ರಾಜ್ಯ ಸರ್ಕಾರಕ್ಕೆ ಮತ್ತು ತುಮಕೂರು ಜಿಲ್ಲಾಧಿಕಾರಿಗೆ ನೋಟಿಸ್ ನೀಡಲು ಆದೇಶಿಸಿದೆ. ಈ ಭೂಮಿಯನ್ನು ಮಾರುಕಟ್ಟೆ ಮೌಲ್ಯ 22.76 ಕೋಟಿ ರೂಪಾಯಿಗಳಾಗಿದ್ದು, ಅಂದು ಅಸ್ಥಿತ್ವದಲ್ಲಿ ಇರದ ಕಾಂಗ್ರೆಸ್ ಭವನ ಟ್ರಸ್ಟ್ಗೆ ಕೇವಲ 17 ಲಕ್ಷ ರೂಪಾಯಿಗೆ ನೀಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪುಣಚ ಅವರ ವಿಭಾಗೀಯ ಪೀಠವು ತುಮಕೂರಿನ ಗೋಪಾಲಕೃಷ್ಣ ಎನ್.ಎನ್. ಸಲ್ಲಿಸಿದ ಅರ್ಜಿಯ ಮೇಲೆ ಈ ಆದೇಶ ನೀಡಿದೆ.
ಅರ್ಜಿಯಲ್ಲಿ ಹೇಳಿರುವ ಪ್ರಕಾರ, ಗೃಹ ಸಚಿವ ಡಾ ಜಿ. ಪರಮೇಶ್ವರ್ ಹಾಗೂ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ಜುಲೈ 11, 2023ರಂದು ‘ರಾಜೀವ್ ಗಾಂಧಿ ಅರ್ಬನ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್’ ನ್ನು ಸ್ಥಾಪಿಸಿದ್ದು, ಆಗಸ್ಟ್ 21, 2023ರಂದು ಅದು ನೋಂದಾಯಿತವಾಗಿದೆ. ನೋಂದಣಿಯ ಒಂದು ತಿಂಗಳೊಳಗೆ, 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿಕೊಂಡ ಈ ಟ್ರಸ್ಟ್ ತುಮಕೂರಿನ ಮರಳೂರು ಗ್ರಾಮದ ಸರ್ವೇ ಸಂಖ್ಯೆ 87/2ರಲ್ಲಿ ಒಂದು ಎಕರೆ ಭೂಮಿಯನ್ನು ಕೇಳಿಕೊಂಡಿತ್ತು.
ಈ ಅರ್ಜಿಯನ್ನು ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ನಂತರ, ಜುಲೈ 30, 2024ರಂದು ಡಾ. ಪರಮೇಶ್ವರ ಅವರು ನಗರಾಭಿವೃದ್ಧಿ ಸಚಿವರಿಗೆ ಈ ಟ್ರಸ್ಟ್ಗೆ ಎರಡು ಏಕರೆ ಭೂಮಿಯನ್ನು ನೀಡಲು ಸೂಚಿಸಿದ್ದರು.
ಆದರೆ, ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ಆ ಭೂಮಿಗೆ ಸಂಬಂಧಿಸಿದ ನ್ಯಾಯಾಂಗ ಪ್ರಕರಣಗಳು ಬಾಕಿಯಲ್ಲಿವೆ ಎಂದು ಸೂಚಿಸಿ, ಖಾಸಗಿ ವ್ಯಕ್ತಿಗಳಿಗೆ ಭೂಮಿ ನೀಡಬೇಕಾದರೆ ಹರಾಜು ಮೂಲಕವೇ ನೀಡಬೇಕು ಎಂದು ಹೇಳಿದರು. ಪ್ರಾದೇಶಿಕ ಆಯುಕ್ತರು ಸಹ ಆ ಭೂಮಿಯನ್ನು ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಟ್ಟಿರುವುದರಿಂದ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು ಎಂದು ಅರ್ಜಿದಾರರು ಹೇಳಿದ್ದಾರೆ.
ಕೊನೆಗೆ, ನಗರಾಭಿವೃದ್ಧಿ ಇಲಾಖೆ ಈ ವಿಷಯವನ್ನು ಸಚಿವ ಸಂಪುಟ ಮುಂದೆ ತಂದು, ಮೇ 22, 2025ರಂದು ಮುಖ್ಯಮಂತ್ರಿಗಳು ಎರಡು ಎಕರೆ ಭೂಮಿಯನ್ನು ಖಾಸಗಿ ಟ್ರಸ್ಟ್ಗೆ ಅಲ್ಲದೆ ‘ಕಾಂಗ್ರೆಸ್ ಭವನ ಟ್ರಸ್ಟ್’ಗೆ ಮಾರ್ಗಸೂಚಿ ಮೌಲ್ಯದ ಕೇವಲ 5 ಶೇಕಡಾ ದರದಲ್ಲಿ ನೀಡಲು ತೀರ್ಮಾನಿಸಿದರು.
ಇದಕ್ಕೆ ಅನುಗುಣವಾಗಿ ಮೇ 27, 2025ರಂದು ಸರ್ಕಾರ ಆದೇಶ ಹೊರಡಿಸಿ ಜೂನ್ 21, 2025ರಂದು ಭೂಮಿಯ ಖಾತಾ ಬದಲಾವಣೆ ನಡೆಯಿತು. ಆಗಸ್ಟ್ 13, 2025ರಂದು ಭೂಮಿಯ ಮಂಜೂರು ಪ್ರಮಾಣಪತ್ರವನ್ನು ಕಾಂಗ್ರೆಸ್ ಭವನ ಟ್ರಸ್ಟ್ಗೆ ನೀಡಲಾಯಿತು. ಆದರೆ ಈ ಟ್ರಸ್ಟ್ ಆಗಸ್ಟ್ 6, 2025ರಂದು ಅಸ್ತಿತ್ವಕ್ಕೆ ಬಂದಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.