ಮೈಸೂರು: ಬೆಂಗಳೂರಿಗೆ ಹೋಲಿಸಿದರೆ ಸಾಂಸ್ಕೃತಿಕ ನಗರಿ ಮೈಸೂರು ಅತ್ಯಂತ ವ್ಯವಸ್ಥಿತವಾಗಿ ಮತ್ತು ಯೋಜಿತವಾಗಿ ರೂಪಿತಗೊಂಡಿರುವ ನಗರವಾಗಿದೆ" ಎಂದು ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಮೈಸೂರಿನ ಓವಲ್ ಮೈದಾನದಲ್ಲಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ 111ನೇ ಜಯಂತಿ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಒತ್ತಡ, ಸಂಚಾರ ದಟ್ಟಣೆ ಹಾಗೂ ಮೂಲಸೌಕರ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕದ ಐದು ಪ್ರಮುಖ ನಗರಗಳಿಗೆ ಹೊಸ ರೂಪ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ನಗರಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ ಸೇವೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸಂಚಾರ ದಟ್ಟಣೆ ನಿವಾರಿಸಲು ಈಗಾಗಲೇ ಹಲವು ಸಣ್ಣ ಮತ್ತು ಪ್ರಮುಖ ನಗರಗಳಿಗೆ ಪ್ರತ್ಯೇಕ ವರ್ತುಲ ರಸ್ತೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿಗಿಂತ ಮೈಸೂರು ಉತ್ತಮವಾಗಿ ಯೋಜಿತ ನಗರ. ಇಲ್ಲಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
‘ಗ್ರೇಟರ್ ಮೈಸೂರು’ ಯೋಜನೆಗೆ ಒತ್ತು
ಕಾವೇರಿ ನೀರಿನ ಸಮಸ್ಯೆ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಹೆಚ್ಚಿನ ಗಮನ ನೀಡಿದ್ದರಿಂದ ಮೈಸೂರಿಗೆ ಅಗತ್ಯ ಗಮನ ನೀಡಲು ಸಾಧ್ಯವಾಗಿರಲಿಲ್ಲ.
“ನಾನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿದ್ದೆ. ಇದೀಗ ಮೈಸೂರಿನತ್ತಲೂ ಗಮನ ಹರಿಸುತ್ತೇನೆ. ಮೈಸೂರು ಬೆಂಗಳೂರಿಗಿಂತ ಉತ್ತಮವಾಗಿ ಯೋಜಿತವಾಗಿದ್ದು, ವೇಗವಾಗಿ ಬೆಳೆಯುತ್ತಿದೆ. ನಗರದ ಸಂರಕ್ಷಣೆ ನನ್ನ ಜವಾಬ್ದಾರಿ. ಅದರ ಭವಿಷ್ಯಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದೇನೆ. ಸಿದ್ದರಾಮಯ್ಯ ಅವರು ‘ಗ್ರೇಟರ್ ಮೈಸೂರು’ ಯೋಜನೆಗೆ ಭರವಸೆ ನೀಡಿದ್ದರು. ಆ ಭರವಸೆಯನ್ನು ಈಡೇರಿಸುವುದು ನಮ್ಮ ಜವಾಬ್ದಾರಿ,” ಎಂದು ಹೇಳಿದರು.
ಶೀಘ್ರದಲ್ಲೇ ಅಧಿಕಾರಿಗಳು, ಸ್ಥಳೀಯ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳ ಸಭೆ ಕರೆದು ಯೋಜನೆ ಕುರಿತು ಚರ್ಚಿಸಿ, ಮೈಸೂರಿನ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ದಸರಾಗೆ ಹೊಸ ರೂಪ
ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೂ ಹೊಸ ರೂಪ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸೇನೆ, ವಾಯುಪಡೆ ಹಾಗೂ ಇತರ ರಕ್ಷಣಾ ಪಡೆಗಳನ್ನು ಒಳಗೊಂಡ ಮೆರವಣಿಗೆ ನಡೆಸುವ ಪ್ರಸ್ತಾವನೆ ಇದೆ ಎಂದು ತಿಳಿಸಿದರು.
ಚಿತ್ರರಂಗದ ಗಣ್ಯರು ಹಾಗೂ ವಿವಿಧ ಸಾಂಸ್ಕೃತಿಕ ತಂಡಗಳನ್ನು ದಸರಾ ಆಚರಣೆಯಲ್ಲಿ ಒಗ್ಗೂಡಿಸುವ ಬಗ್ಗೆಯೂ ಅವರು ಸಲಹೆ ನೀಡಿದ್ದಾರೆ.
ಕನ್ನಡ ಚಿತ್ರರಂಗದ ನಟ-ನಟಿಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಒಂದೇ ಪ್ರಕಾರದ ಐವರು ಜಾನಪದ ಕಲಾವಿದರಿಗೆ ಮಾತ್ರ ಅವಕಾಶ ಇರುವುದಿಲ್ಲ. ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಮೆರವಣಿಗೆಯ ಸ್ವರೂಪವನ್ನು ಬದಲಾಯಿಸಲು ನಾನು ಬಯಸಿದ್ದೇನೆ ಎಂದರು.
ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವ ಪ್ರಸ್ತಾವನೆ ಕುರಿತು ಮಾತನಾಡಿದ ಅವರು, ಇದನ್ನು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿಲ್ಲ ಮತ್ತು ಇನ್ನೂ ಚರ್ಚೆ ನಡೆಸುತ್ತಿರುವುದಾಗಿ ಹೇಳಿದರು.
ಕಂಬಳ ಆಯೋಜನೆ ಕುರಿತು ಇನ್ನೂ ಚರ್ಚಿಸುತ್ತಿದ್ದೇನೆ. ಪರಿಸರ ಹಾನಿಯಾಗುತ್ತದೆ ಎಂಬುದು ಕೇವಲ ನೆಪ. ಯಾವುದೇ ಪರಿಸರ ಹಾನಿಯಾಗುವುದಿಲ್ಲ ಮತ್ತು ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವೂ ಇರುವುದಿಲ್ಲ. ಕೆಲವರು ವಿರೋಧಿಸುತ್ತಿದ್ದಾರೆ. ಅಂತಿಮವಾಗಿ ನಾನು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದಸರಾ ಆಚರಣೆಯನ್ನು ಸರಳಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ದಸರಾವನ್ನು ಅದ್ಧೂರಿಯಾಗಿ ಆಯೋಜಿಸುತ್ತೇನೆ. ಸರಳ ಕಾರ್ಯಕ್ರಮ ಮಾಡುವ ಪ್ರಶ್ನೆಯೇ ಇಲ್ಲ. ಇಡೀ ಪ್ರವಾಸೋದ್ಯಮ ಕ್ಷೇತ್ರ ದಸರಾವನ್ನು ಅವಲಂಬಿಸಿದೆ. ಹೀಗಾಗಿ ಆಚರಣೆಯನ್ನು ಸರಳಗೊಳಿಸಲು ಸಾಧ್ಯವಿಲ್ಲ ಎಂದರು.
ರಾಜಕೀಯ ಲಾಭಕ್ಕಾಗಿ ನಾಗೇಂದ್ರರನ್ನು ಬಲಿಕೊಟ್ಟ ಬಿಜೆಪಿ
ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿ, ರಾಜಕೀಯ ಲಾಭಕ್ಕಾಗಿ ಬಿಜೆಪಿ ನಿರಪರಾಧಿ ವ್ಯಕ್ತಿಯೊಬ್ಬರನ್ನು ಬಲಿಕೊಟ್ಟಿದೆ ಎಂದು ಆರೋಪಿಸಿದರು.
ಯಾವುದೇ ತಪ್ಪು ಮಾಡದಿದ್ದರೂ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯ ಬಳಿಕವೂ ಬಿಜೆಪಿ ಪಾದಯಾತ್ರೆ ನಡೆಸಲು ಬಯಸಿದರೆ ನಡೆಸಲಿ. ಅವರು ರಾಜಕೀಯ ಕಾರಣಗಳಿಗಾಗಿ ಇದನ್ನು ಮಾಡುತ್ತಿದ್ದಾರೆ. ನಾನು ಕೇಳಿದ ಒಂದೇ ಒಂದು ಪ್ರಶ್ನೆಗೂ ಬಿಜೆಪಿ ಉತ್ತರಿಸಿಲ್ಲ. ನಾಗೇಂದ್ರ ಅವರನ್ನು ಏಕೆ ರಾಜೀನಾಮೆ ನೀಡುವಂತೆ ಮಾಡಲಾಯಿತು ಎಂಬುದನ್ನು ಬಿಜೆಪಿ ವಿವರಿಸಬೇಕು,” ಎಂದು ಹೇಳಿದರು.
ತಾವು ವಿಧಾನಸೌಧವನ್ನು ಮಾರಾಟ ಮಾಡಲಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೂ ಅವಕು ತಿರುಗೇಟು ನೀಡಿದರು.
ಯಾರು ಏನನ್ನು ಮಾರಾಟ ಮಾಡಲು ಮುಂದಾಗಿದ್ದರು ಎಂಬ ಇತಿಹಾಸ ಬಹಿರಂಗವಾದರೆ ಎಲ್ಲವೂ ಹೊರಬರುತ್ತದೆ. ಸದ್ಯ ಆ ವಿಚಾರಕ್ಕೆ ಹೋಗಲು ನಾನು ಬಯಸುವುದಿಲ್ಲ. ಕುಮಾರಸ್ವಾಮಿ ಅವರಿಗೆ ಮಾತನಾಡುವುದು ಇಷ್ಟ. ಅವರು ಮಾತನಾಡಲಿ, ಆನಂದಿಸಲಿ. ಮತ್ತೆ ನನ್ನನ್ನು ಟೀಕಿಸಲಿ ಎಂದು ಳಿದರು.