ಬೆಂಗಳೂರು: ಕೇಂದ್ರದಿಂದ ಮೂಲಧನ ಹೂಡಿಕೆಗಾಗಿ (2025-26) ರಾಜ್ಯಕ್ಕೆ ವಿಶೇಷ ಸಹಾಯಧನವಾಗಿ ಬಿಡುಗಡೆಗೊಂಡಿದ್ದ 1,323.96 ಕೋಟಿ ರೂಪಾಯಿಗಳನ್ನು ಇತರೆ ಉದ್ದೇಶಗಳಿಗೆ ಸರ್ಕಾರ ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರದಿಂದ ನೀಡುವ ಅನುದಾನಗಳು ನಿರ್ದಿಷ್ಟ ಯೋಜನೆಗಳಿಗೆ ಮಾತ್ರವಾಗಿದ್ದು, ಪ್ರಗತಿ ವರದಿಗಳು ಮತ್ತು ಬಳಕೆ ಪ್ರಮಾಣಪತ್ರಗಳು (UCs) ಸಲ್ಲಿಸಿದ ನಂತರ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ.
ಆದರೆ ರಾಜ್ಯ ಸರ್ಕಾರವು ಸಣ್ಣ ನೀರಾವರಿ ಯೋಜನೆಗಳಿಗೆ (ಕೃಷ್ಣ ಭಾಗ್ಯ ಜಲ ನಿಗಮ್ ಲಿಮಿಟೆಡ್ ಮತ್ತು ಕರ್ನಾಟಕ ನೀರಾವರಿ ನಿಗಮ್ ಲಿಮಿಟೆಡ್ಗೆ) ಹಣ ಬಿಡುಗಡೆ ಮಾಡಿಲ್ಲ. ಹಣಕಾಸು ಇಲಾಖೆ ಮೊತ್ತವನ್ನು ತಡೆಹಿಡಿದು, ಮುಂದಿನ ಹಂತದ ಅನುದಾನ ಪಡೆಯಲು ಕೃತಕ ಯುಸಿಗಳನ್ನು ಸಲ್ಲಿಸುವಂತೆ ಇಲಾಖೆಗೆ ಒತ್ತಡ ಹೇರಿದೆ ಎಂದು ಆರೋಪಿಸಿದರು.
ಸಣ್ಣ ನೀರಾವರಿ ಯೋಜನೆಗಳಿಗೆ ಸಾಲ-ಬಡ್ಡಿರಹಿತ ವಿಶೇಷ ಸಹಾಯ ಕುರಿತು (ಜುಲೈ 1, 2025ರ ದಿನಾಂಕದ) ದಾಖಲೆಗಳನ್ನು ಉಲ್ಲೇಖಿಸಿದ ವಿಜಯೇಂದ್ರ, ಕೃತಕ ಬಳಕೆ ಪ್ರಮಾಣಪತ್ರಗಳ ಆರೋಪದ ಬಗ್ಗೆ ಹಣಕಾಸು ಖಾತೆಯನ್ನೂ ಹೊತ್ತಿರುವ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ನಿಗಮ ಹಗರಣವನ್ನು ಉಲ್ಲೇಖಿಸಿದ ಅವರು, ಅನೇಕ ಬ್ಯಾಂಕ್ ಖಾತೆಗಳ ಮೂಲಕ ಕೋಟ್ಯಾಂತರ ರೂಪಾಯಿಗಳನ್ನು ತೆಲಂಗಾಣಕ್ಕೆ ವರ್ಗಾಯಿಸುವುದು ಮುಖ್ಯಮಂತ್ರಿ ಅವರ ಅನುಮತಿಯಿಲ್ಲದೆ ಸಾಧ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ, ಗೃಹಲಕ್ಷ್ಮಿ ಯೋಜನೆಗಾಗಿ ಮೀಸಲಿಟ್ಟಿರುವ 5,000 ಕೋಟಿ ರೂಪಾಯಿಗಳ ಸ್ಥಿತಿಗತಿಯ ಕುರಿತು ಕೂಡ ಸ್ಪಷ್ಟತೆ ನೀಡುವಂತೆ ಅವರು ಆಗ್ರಹಿಸಿದರು.
ಅಹಿಂದ ನಾಯಕ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಕೆಲಸ ಮಾಡಿಲ್ಲ ಎಂದು ಆರೋಪಿಸಿದ ವಿಜಯೇಂದ್ರ, ಹಿಂದುಳಿದ ವರ್ಗಗಳು ಮತ್ತು ಅಹಿಂದ ಸಮುದಾಯಗಳಿಗೆ ಸೇರಿದ ಜಾತಿ ಆಧಾರಿತ ಅಭಿವೃದ್ಧಿ ನಿಗಮಗಳಿಗೆ ನೀಡುವ ಅನುದಾನವನ್ನು ಸಿದ್ದರಾಮಯ್ಯ ಸರ್ಕಾರ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಕಾಂಗ್ರೆಸ್ ಅಹಿಂದ ಸಮುದಾಯಗಳನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸುತ್ತಿದೆ ಎಂದು ಹೇಳಿದರು.
ಅನುಗ್ರಹ ಯೋಜನೆಯಡಿ (ಕುರಿ ಅಥವಾ ಆಡು ಸತ್ತಲ್ಲಿ ಕುರಿಗಾಹಿಗಳಿಗೆ ನೀಡುವ ಆರ್ಥಿಕ ನೆರವು) 65 ಕೋಟಿ ರೂಪಾಯಿ ಬಾಕಿ ಇರುವುದನ್ನು ಉಲ್ಲೇಖಿಸಿದ ಅವರು, ಹಾಲುಮತ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿಯೇ ಆ ಸಮುದಾಯಕ್ಕೆ ಹೆಚ್ಚಿನ ಸಹಾಯ ಮಾಡಿಲ್ಲ. ಮುಂದಿನ ರಾಜ್ಯ ಬಜೆಟ್ನಲ್ಲಿ ಅಹಿಂದ ಸಮುದಾಯಗಳಿಗೆ 1,000 ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಅಧಿಕಾರದಲ್ಲಿ 1,000 ದಿನಗಳನ್ನು ಆಚರಿಸುತ್ತಿರುವುದನ್ನು ಟೀಕಿಸಿದ ವಿಜಯೇಂದ್ರ, ಈ ಮೈಲಿಗಲ್ಲನ್ನು ಸಾವಿರ ಸುಳ್ಳುಗಳ ಮೂಲಕ ಆಚರಿಸಲಾಗುತ್ತಿದೆ ಎಂದು ಆರೋಪಿಸಿದರು. ಬಡವರು, ರೈತರು, ಮಹಿಳೆಯರು ಮತ್ತು ಯುವಕರಿಗೆ ಸರ್ಕಾರ ದ್ರೋಹ ಮಾಡಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರವು 2.85 ಲಕ್ಷ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ವಿಫಲವಾಗಿದೆ, 2006 ನಂತರ ನೇಮಕಗೊಂಡ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತಂದಿಲ್ಲ ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನ ಊಟ ಕಾರ್ಮಿಕರ ಗೌರವಧನವನ್ನು ಹೆಚ್ಚಿಸಿಲ್ಲ, ಹಾಗೂ 1.41 ಲಕ್ಷ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸಲಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು.
ಇದಲ್ಲದೆ, ಜಾತಿ ಸಮೀಕ್ಷೆಗಾಗಿ 170 ಕೋಟಿ ರೂಪಾಯಿ ಮತ್ತು 450 ಕೋಟಿ ರೂಪಾಯಿ ವೆಚ್ಚವನ್ನು ಸರ್ಕಾರ ಹೇಗೆ ಸಮರ್ಥಿಸುತ್ತದೆ ಎಂದು ಅವರು ಪ್ರಶ್ನಿಸಿದರು.