ಕಾರವಾರ: ಲಾರಿ ಹಾಗೂ ಕ್ರೂಸರ್ ( ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಆರೆಬೈಲಿನಲ್ಲಿ ನಡೆದಿದೆ.
ಕ್ರೂಸರ್ ಧಾರವಾಡದಿಂದ ಅಂಕೋಲಾ ಕಡೆ ತೆರಳುತ್ತಿದ್ದು, ಲಾರಿ ಯಲ್ಲಾಪುರದಿಂದ ಅಂಕೋಲಾ ಕಡೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕ್ರೂಸರ್ನಲ್ಲಿ ಇದ್ದ ಧಾರವಾಡದ ಬಸವರಾಜ್, ಮಂಜುನಾಥ್ ಚುಲ್ಲಕ್ಕಿ, ಅಭಿಷೇಕ್ ಮಲ್ಲೇಶ್ ಮಡಬಾವಿ, ಅಕ್ಷಯ್ ಮಲ್ಲಣ್ಣನವರ್ ಮೃತಪಟ್ಟಿದ್ದಾರೆ.
ಅಪಘಾತಕ್ಕೊಳಗಾದ ತೂಫಾನ್ ಕ್ರೂಸರ್ ವಾಹನದಲ್ಲಿದ್ದ (KA 19 AA 5920) ಚಾಲಕ ಸೇರಿ ಒಟ್ಟು 9 ಜನರು ಧಾರವಾಡ ಮೂಲದವರಾಗಿದ್ದಾರೆ. ಇವರೆಲ್ಲರೂ ಸ್ವಿಗ್ಗಿ ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬುಧವಾರ (ಜು.8) ರಾತ್ರಿ ಇವರೆಲ್ಲರೂ ಸೇರಿ ಧರ್ಮಸ್ಥಳ ಹಾಗೂ ಚಿಕ್ಕಮಗಳೂರು ಪ್ರವಾಸಕ್ಕೆಂದು ಹೊರಟಿದ್ದರು.
ಕ್ರೂಸರ್ ಚಾಲಕ ಸಂಜೀವ್ ವಾಹನವನ್ನು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿ, ರಸ್ತೆಯ ಬಲಭಾಗಕ್ಕೆ ತಿರುಗಿ ಅಂಕೋಲಾದಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದ ಪರಿಣಾಮವಾಗಿ ವಾಹನವು ನಜ್ಜುಗುಜ್ಜಾಗಿದೆ. ಮೃತರನ್ನ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.