ಎಐ ಸೃಷ್ಟಿತ ಚಿತ್ರ 
ರಾಜ್ಯ

Lokayukta ಸಂಸ್ಥೆ ವಿರುದ್ಧ ಅವಹೇಳನಕಾರಿ ಕಾಮೆಂಟ್: ಇಬ್ಬರು ವೈದ್ಯರ ವಿರುದ್ಧ ಕೇಸ್ ದಾಖಲು..!

ಜೂನ್ 19 ಮತ್ತು 20ರಂದು ಬೀದರ್ ಜಿಲ್ಲಾ ಪ್ರವಾಸದ ವೇಳೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಲೋಕಾಯುಕ್ತ ಸಂಸ್ಥೆ ಹಾಗೂ ಉಪ ಲೋಕಾಯುಕ್ತರ ಕುರಿತು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದ ಆರೋಪದ ಮೇಲೆ ಇಬ್ಬರು ವೈದ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿ ನೋಟಿಸ್ ಜಾರಿಗೊಳಿಸಿದ್ದಾರೆ.

ಆರೋಪಿಗಳನ್ನು ವಿಜಯಪುರದ ಆದರ್ಶ ನಗರ ನಿವಾಸಿ ಡಾ. ಅಮಿತ್ ಪುಂಡಲೀಕ್ ಕಾಳೆ ಹಾಗೂ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಕೌಠಾ (ಬಿ) ಗ್ರಾಮದ ಡಾ. ಸಿದ್ದು ಎಂದು ಗುರುತಿಸಲಾಗಿದೆ.

ಇವರು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (BIMS) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಡಿಯೊಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದರು ಎನ್ನಲಾಗಿದೆ.

ಜೂನ್ 19 ಮತ್ತು 20ರಂದು ಬೀದರ್ ಜಿಲ್ಲಾ ಪ್ರವಾಸದ ವೇಳೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಪ್ರಯೋಗಾಲಯ ತಂತ್ರಜ್ಞ ಸಂಜುಕುಮಾರ್ ಅವರ ಬಳಿ ರೂ.90 ಸಾವಿರ ನಗದು, ರೂ.8.61 ಲಕ್ಷ ಮೌಲ್ಯದ ಚೆಕ್‌ಗಳ ದಾಖಲೆಗಳು, 10 ಎಟಿಎಂ ಹಾಗೂ ಕ್ರೆಡಿಟ್ ಕಾರ್ಡ್‌ಗಳು ಪತ್ತೆಯಾಗಿದ್ದವು.

ಈ ಪೈಕಿ ಏಳು ಡೆಬಿಟ್ ಕಾರ್ಡ್‌ಗಳು ಸಂಜುಕುಮಾರ್ ಹೆಸರಿನಲ್ಲಿದ್ದು, ಉಳಿದವು ಅವರ ಪತ್ನಿಯ ಹೆಸರಿನಲ್ಲಿದ್ದವು. ಈ ಬಗ್ಗೆ ಪ್ರಶ್ನಿಸಿದಾಗ ಅವರು ಸಮರ್ಪಕ ಉತ್ತರ ನೀಡದೆ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.

ಪರಿಶೀಲನೆ ವೇಳೆ ಆಸ್ಪತ್ರೆಯ ವಾರ್ಡ್‌ಗಳಲ್ಲಿ ರೋಗಿಗಳಿಗೆ ನೀಡಲಾಗುತ್ತಿದ್ದ ದಿಂಬು, ಹಾಸಿಗೆ ಹಾಗೂ ಬೆಡ್‌ಶೀಟ್‌ಗಳು ಹರಿದು ಹೋಗಿದ್ದು, ಕೆಟ್ಟ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿತ್ತು.

ಆಸ್ಪತ್ರೆಗೆ ಪ್ರತಿವರ್ಷ ಹಾಸಿಗೆ, ದಿಂಬು, ಬೆಡ್‌ಶೀಟ್ ಹಾಗೂ ಇತರ ಅಗತ್ಯ ವಸ್ತುಗಳ ಖರೀದಿಗೆ ರೂ.14.40 ಕೋಟಿ ಅನುದಾನ ಬಿಡುಗಡೆಯಾಗುತ್ತಿದ್ದರೂ, 2023ರಿಂದ ಯಾವುದೇ ಖರೀದಿ ನಡೆದಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು.

ಈ ನಿರ್ಲಕ್ಷ್ಯಕ್ಕೆ ಆಸ್ಪತ್ರೆ ಅಧಿಕಾರಿಗಳನ್ನು ನ್ಯಾಯಮೂರ್ತಿ ಬಿ. ವೀರಪ್ಪ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವೈರಲ್ ವಿಡಿಯೊಗೆ ಇಬ್ಬರು ವೈದ್ಯರು ಅವಹೇಳನಕಾರಿ ಹಾಗೂ ನಿಂದನಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದರ ಬೆನ್ನಲ್ಲೇ ಸೈಬರ್ ಕ್ರೈಂ ಪೊಲೀಸರ ಸಹಾಯದಿಂದ ಅವರ ಗುರುತು ಪತ್ತೆಹಚ್ಚಿದ ಉಪ ಲೋಕಾಯುಕ್ತರು, ಇಬ್ಬರ ವಿರುದ್ಧವೂ ಪ್ರತ್ಯೇಕ ದೂರು ದಾಖಲಿಸಿ ನೋಟಿಸ್ ಜಾರಿಗೊಳಿಸಿದ್ದಾರೆ.

ದೂರಿನಲ್ಲಿ, ವೈದ್ಯರಾಗಿರುವ ಆರೋಪಿಗಳು ಯಾವುದೇ ಜವಾಬ್ದಾರಿಯಿಲ್ಲದೆ ಲೋಕಾಯುಕ್ತ ಸಂಸ್ಥೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದರಿಂದ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಿದ್ದು, ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ. ಅಲ್ಲದೆ, ತಮ್ಮ ಸಾಂವಿಧಾನಿಕ ಹಾಗೂ ಸಂಸ್ಥೆಯ ಜವಾಬ್ದಾರಿಗಳನ್ನು ನಿರ್ವಹಿಸುವ ಅಧಿಕಾರಿಗಳನ್ನು ನಿರುತ್ಸಾಹಗೊಳಿಸುವ ಪ್ರಯತ್ನವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಈ ಕೃತ್ಯವು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 17 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 132 ಮತ್ತು 353(2) ಅಡಿಯಲ್ಲಿ ಅಪರಾಧವಾಗಿದ್ದು, ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದರೆ ಅಥವಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುರಿದುಬಿದ್ದ ಶಾಂತಿ ಒಪ್ಪಂದ: ಇರಾನ್ ಮೇಲೆ ಅಮೆರಿಕ ಭಾರಿ ವೈಮಾನಿಕ ದಾಳಿ; ಮೂರು ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಪ್ರತಿದಾಳಿ, ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ..!

ಯುದ್ಧದಲ್ಲಿ ಈಗಾಗಲೇ ಗೆದ್ದಿದ್ದೇವೆ, ಒಪ್ಪಂದಕ್ಕಾಗಿ ಇರಾನ್ ಬೇಡಿಕೊಳ್ಳುತ್ತಿದೆ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೇರಿಕಾ ಷೇರುಮಾರುಕಟ್ಟೆ ಕುಸಿತ ಖಚಿತ! (ಹಣಕ್ಲಾಸು)

ಆಸ್ಟ್ರೇಲಿಯಾದಲ್ಲಿ ಮೊಳಗಿದ 'ಮಾ ತುಝೇ ಸಲಾಂ'; ಮೋದಿಗೆ ಅದ್ಧೂರಿ ಸ್ವಾಗತ, ತಬಲಾ-ಡಿಡ್ಜೆರಿಡೂ ಜುಗಲ್‌ಬಂದಿಗೆ ಮನಸೋತ ಪ್ರಧಾನಿ..!

ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರದ ಬುಡ ಅಲುಗಾಡಬಹುದು: ಮೂರನೇ CM ಬರಲು ಸಾಧ್ಯವಿಲ್ಲ; ಸತೀಶ್ ಜಾರಕಿಹೊಳಿ