ಬೆಂಗಳೂರು: 5 ವರ್ಷದ ಮಗುವಿನ ಅಂಗಾಂಗ ದಾನವು 13 ವರ್ಷದ ಬಾಲಕಿ ಲಕ್ಷ್ಮೀ ಪ್ರಿಯಾ ಗೆ ಹೊಸ ಬದುಕಿನ ಭರವಸೆ ನೀಡಿದೆ.
ಅಪರೂಪದ ಜನ್ಮಜಾತ ಪಿತ್ತನಾಳದ ಕಾಯಿಲೆ ಬಿಲಿಯರಿ ಅಟ್ರೇಶಿಯಾಯಿಂದ ಬಳಲುತ್ತಿದ್ದ ಲಕ್ಷ್ಮೀ ಪ್ರಿಯಾಗೆ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರು ಇದೀಗ ಆರೋಗ್ಯಕರ ಜೀವನದತ್ತ ಚೇತರಿಸಿಕೊಳ್ಳುತ್ತಿದ್ದಾರೆ.
ಶಿಶುವಾಗಿದ್ದಾಗಲೇ ಕಾಯಿಲೆ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ 2012ರಲ್ಲಿ ಕಸಾಯಿ ಪೋರ್ಟೋಎಂಟೆರೋಸ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೂ, ಕಾಲಕ್ರಮೇಣ ಲಿವರ್ಗೆ ತೀವ್ರ ಹಾನಿಯಾಗಿದ್ದು, ಕಾಮಾಲೆ, ದೈಹಿಕ ಬೆಳವಣಿಗೆ ಕುಂಠಿತ, ಪದೇ ಪದೇ ಆಸ್ಪತ್ರೆಗೆ ದಾಖಲಾಗುವುದು ಹಾಗೂ ಪೋರ್ಟಲ್ ಹೈಪರ್ಟೆನ್ಷನ್ನಿಂದ ಜೀರ್ಣಾಂಗದ ರಕ್ತಸ್ರಾವದ ಅಪಾಯ ಎದುರಿಸುತ್ತಿದ್ದರು.
ಮೈಸೂರಿನ ಐದು ವರ್ಷದ ಮಗುವಿನ ಯಕೃತ್ತು ಅಂಗಾಂಗ ದಾನದ ಮೂಲಕ ದೊರೆಯಿತು. ಈ ಸಕಾಲದಲ್ಲಿ ದೊರೆತ ಅಂಗಾಂಗ ದಾನ, ವಿವಿಧ ವಿಭಾಗಗಳ ವೈದ್ಯರ ಸಮನ್ವಯ ಹಾಗೂ ಎಲ್ಲರ ಸಹಕಾರದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಇದೀಗ ಬಾಲಕಿಗೆ ಆರೋಗ್ಯಕರ ಜೀವನ ನಡೆಸುವ ಅವಕಾಶ ದೊರೆತಿದೆ ಎಂದು ಸ್ಪರ್ಶ್ ಆಸ್ಪತ್ರೆಯ ಎಚ್ಪಿಬಿ ಮತ್ತು ಲಿವರ್ ಟ್ರಾನ್ಸ್ಪ್ಲಾಂಟ್ ಸೇವೆಗಳ ಕನ್ಸಲ್ಟೆಂಟ್ ಡಾ.ಗೌತಮ್ ಕುಮಾರ್ ತಿಳಿಸಿದ್ದಾರೆ.
ಅಂಗಾಂಗ ದಾನವು ಮಾನವೀಯತೆಯ ಅತ್ಯುನ್ನತ ಸೇವೆ. ಒಂದು ಮಗುವಿನ ಜೀವ ಉಳಿಸಲು ಮತ್ತೊಂದು ಕುಟುಂಬದ ಅಂಗಾಂಗ ದಾನ ಹಾಗೂ ಇಡೀ ಗ್ರಾಮದ ಸಹಕಾರ ಒಂದಾದರೆ ಜೀವಗಳನ್ನು ಉಳಿಸಬಹುದು ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ಉದಾಹರಣೆ ಎಂದು ಸ್ಪರ್ಶ್ ಆಸ್ಪತ್ರೆ ಯಶವಂತಪುರದ ಯುನಿಟ್ ಸಿಒಒ ಅರ್ನಬ್ ಆದಕ್ ಹೇಳಿದರು.