ಬೆಂಗಳೂರು: ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಅವರ ಪುತ್ರಿ ಸುಮಾ ಎಸ್ ಸಾಹುಕಾರ್ ವಿರುದ್ಧ ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ನಕಲಿ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಅಭ್ಯರ್ಥಿಗಳ ದಾಖಲೆ ಪರಿಶೀಲನೆ ವೇಳೆ ಸುಮಾ ಸಲ್ಲಿಸಿದ್ದ ದಾಖಲೆಗಳಲ್ಲಿನ ವಂಚನೆ ಬಯಲಾಗಿದೆ.
ಈ ಪ್ರಕರಣ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಎಸ್ ಸಿ ಸಾಂವಿಧಾನಾತ್ಮಕ ಸಂಸ್ಥೆಯಾಗಿರುವುದರಿಂದ ಕಾನೂನಾತ್ಮಕವಾಗಿ ಹೇಗೆ ನಿಭಾಯಿಸಬಹುದು ಎಂದು ನೋಡುತ್ತೇವೆ ಎಂದರು.
ಇದು ಬೇಲಿಯೇ ಎದ್ದು ಹೊಲ ಮೇಯ್ದಂಥ ಪ್ರಕರಣ. ಬೇಲಿಯೇ ಎದ್ದು ಹೊಲ ಮೇಯ್ದರೆ ಏನು ಮಾಡಲು ಸಾಧ್ಯ, ಪರಿಸ್ಥಿತಿ ನಮ್ಮ ಕೈಯಲ್ಲಿಲ್ಲ. ಇಲ್ಲಿ ಎರಡು ವಿಚಾರ, ನನಗೆ ಸ್ವತಂತ್ರವಾಗಿ ಈ ವಿಚಾರ ಬಿಟ್ಟರೆ ಕೆಎಟಿ, ಕೆಪಿಎಸ್ ಸಿನ ರದ್ದು ಮಾಡ್ತೀನಿ. ಅದು ಸಂವಿಧಾನಾತ್ಮಕವಾಗಿಯೇ ಮಾಡಬೇಕಾಗುತ್ತದೆ, ಹೊಸ ಕಾನೂನು ತರಬೇಕಾಗುತ್ತದೆ. ಕಾನೂನು ಮಾಡುವವರು ನಾವೇ ತಾನೇ. ಶಾಸಕನವನ್ನು ರಚನೆ ಮಾಡುವ ನಾವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಲ್ಲರೂ ಸೇರಿ ಒಂದು ತೀರ್ಮಾನ ತೆಗೆದುಕೊಂಡರೆ ಶುದ್ದೀಕರಣ ಮಾಡಲು ಒಂದು ತೀರ್ಮಾನಕ್ಕೆ ಬರಬಹುದು.ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಸರಿಯಲ್ಲ ಎಂದರು.
ವ್ಯವಸ್ಥೆ ಹಾದಿತಪ್ಪಿ ಹೋದಾಗ ಯುವಕರು ತಿರುಗಿಬೀಳುತ್ತಾರೆ, ಅದನ್ನು ನಾವು ನೋಡಿದ್ದೇವೆ. ನಿನ್ನೆ ಕೇಸಿನ ಬಗ್ಗೆ ಎಫ್ ಐಆರ್ ಆಗಿದೆ, ಅದರ ಸತ್ಯಾಸತ್ಯತೆ ನೋಡಿ ಹೇಳಬೇಕಾಗುತ್ತದೆ. ದಾಖಲೆ ಸೂಕ್ತವಾಗಿ ಪರಿಶೀಲಿಸಿ ಹೇಳಬೇಕಾಗುತ್ತದೆ ಎಂದರು.
ಕೆಪಿಎಸ್ಸಿಯಲ್ಲಿ ನೇಮಕಾತಿ ನಿಲ್ಲುವುದಿಲ್ಲ, ಮುಂದುವರಿಯುತ್ತದೆ, ಈ ಹಿಂದೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ತಂದಿದ್ದೇವೆ. ಅದಕ್ಕೆ ನಿಯಮ ರಚನೆಯಾಗಿರಲಿಲ್ಲ, ಅದನ್ನು ಇನ್ನೊಂದು ವಾರ ಹತ್ತು ದಿನಗಳಲ್ಲಿ ಮಾಡುತ್ತೇನೆ ಎಂದು ಸಚಿವ ಖರ್ಗೆ ತಿಳಿಸಿದರು.
ಸುಮಾ ಅವರು ತಮ್ಮ ಕುಟುಂಬದ ವಾರ್ಷಿಕ ಆದಾಯವನ್ನು 40,000 ರೂಪಾಯಿ ಎಂದು ನಮೂದಿಸಿದ್ದಾರೆ. ಆದರೆ, ಅವರ ತಂದೆ ಶಿವಶಂಕರಪ್ಪ ಅವರ ಮಾಸಿಕ ವೇತನವೇ 2,25,000 ರೂಪಾಯಿ ಆಗಿದ್ದು, ಇದು ವಾರ್ಷಿಕ 40,000 ರೂಪಾಯಿ ಆದಾಯಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಸುಳ್ಳು ದಾಖಲೆಗಳನ್ನು ನೀಡಿ ಮೀಸಲಾತಿ ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ಆರೋಪವಿದೆ.