ಬೆಂಗಳೂರು: ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ದೊರೆತಿರುವ ಹಿನ್ನೆಲೆಯಲ್ಲಿ, ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎನ್ನಲಾಗುತ್ತಿದ್ದು, ಈ ಬೆಳವಣಿಗೆ ಪರಿಷತ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ದೂರವಾಣಿ ಮೂಲಕ ಬಸವರಾಜ್ ಹೊರಟ್ಟಿ ಅವರನ್ನು ಸಂಪರ್ಕಿಸಿರುವ ರಾಜ್ಯ ಸರ್ಕಾರ ಮುಂಬರುವ ಅಧಿವೇಶನಕ್ಕೂ ಮುನ್ನ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಭಾಪತಿ ಸ್ಥಾನದಿಂದ ಹೊರಟ್ಟಿ ಅವರನ್ನು ಕೆಳಗಿಳಿಸಲು ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ನಿರೀಕ್ಷೆಯಿದೆ.
ಇದಕ್ಕೂ ಮುನ್ನ ವಿಜಯಪುರದಲ್ಲಿ ಮಾತನಾಡಿದ್ದ ಬಸವರಾಜ್ ಹೊರಟ್ಟಿ, "ಸರ್ಕಾರದಿಂದ ಅಧಿಕೃತ ನೋಟಿಸ್ ಬಂದರೆ ಒಂದು ಸೆಕೆಂಡ್ನಲ್ಲೇ ರಾಜೀನಾಮೆ ನೀಡುತ್ತೇನೆ" ಎಂದು ಹೇಳಿದ್ದರು.
ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ತರುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು, 1956ರಿಂದ ಇಲ್ಲಿಯವರೆಗೆ ಯಾವುದೇ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಉದಾಹರಣೆಯೇ ಇಲ್ಲ. ಎಲ್ಲ ಸಭಾಪತಿಗಳೂ ತಮ್ಮ ಪೂರ್ಣ ಅವಧಿಯನ್ನು ಮುಗಿಸಿದ್ದಾರೆ. ಈಗ ಹೊಸ ಸಂಪ್ರದಾಯಕ್ಕೆ ಚಾಲನೆ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಾದರೆ ಅದಕ್ಕೆ ಸಮರ್ಪಕ ಕಾರಣ ಇರಬೇಕು. ಭ್ರಷ್ಟಾಚಾರ, ಪಕ್ಷಪಾತ ಅಥವಾ ಕರ್ತವ್ಯಲೋಪದಂತಹ ಆರೋಪಗಳು ಇರಬೇಕು. ಯಾವುದೇ ಕಾರಣವಿಲ್ಲದೆ ಕೇವಲ ಬಹುಮತವಿದೆ ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳುವುದು ಸರಿಯಲ್ಲ" ಎಂದು ಅಭಿಪ್ರಾಯಪಟ್ಟರು.
ತಮ್ಮನ್ನು ಸಭಾಪತಿ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಹಿರಿಯ ವಿಧಾನ ಪರಿಷತ್ ಸದಸ್ಯರು ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಶೇ.90ರಷ್ಟು ವಿಧಾನ ಪರಿಷತ್ ಸದಸ್ಯರು ನನ್ನ ಪರವಾಗಿದ್ದಾರೆ. ನನಗೆ ಅವರ ವಿಶ್ವಾಸ ಮತ್ತು ಗೌರವವೇ ಮುಖ್ಯ ಎಂದರು.
ಕಾಂಗ್ರೆಸ್ ಬಹುಮತದ ಬಲದಿಂದ ಸಭಾಪತಿ ಸ್ಥಾನದಲ್ಲಿ ಬದಲಾವಣೆ ತರಲು ಮುಂದಾಗುತ್ತದೆಯೇ ಅಥವಾ ಹೊರಟ್ಟಿ ಸ್ವಯಂ ರಾಜೀನಾಮೆ ನೀಡುತ್ತಾರೆಯೇ ಎಂಬುದು ಈಗ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.