ರಾಮ ಮಂದಿರ ದೇಣಿಗೆ ವಿಚಾರದಲ್ಲಿ ಆಗಿರುವ ಹಗರಣ ಸಂಬಂಧ ಮಾಧ್ಯಮಗಳು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡದೆ ವಿರೋಧ ಪಕ್ಷವನ್ನು ಮಾತ್ರ ಪ್ರಶ್ನಿಸುತ್ತಿದೆ ಏಕೆ, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಏಕೆ ಮೌನವಾಗಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ತಿನ್ನುವುದಿಲ್ಲ, ಬೇರೆಯವರನ್ನು ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿರುವ ಪ್ರಧಾನಿ ಮೋದಿಯವರು ಈಗ ರಾಮದೇವರ ಹೆಸರಿನಲ್ಲಿ ನಡೆದ ಭ್ರಷ್ಟಾಚಾರ ಹಗರಣಕ್ಕೆ ಏನು ಉತ್ತರ ಕೊಡುತ್ತಾರೆ ಎಂದು ಕೇಳಿದರು.
'ದೇವರ ಹೆಸರಿನಲ್ಲಿ ಭ್ರಷ್ಟಾಚಾರ ಎಸಗಿ ಜನರ ನಂಬಿಕೆಗೆ ದ್ರೋಹ ಮಾಡಿದೆ ಕೇಂದ್ರ ಸರ್ಕಾರ; ಇದರ ಬಗ್ಗೆ 'ಮನ್ ಕಿ ಬಾತ್' ಯಾಕಿಲ್ಲ? ರಾಮ ಮಂದಿರ ಉದ್ಘಾಟನೆ ಮಾಡಿದ ಬಿಜೆಪಿಯವರು ಇದಕ್ಕೆ ಉತ್ತರ ಕೊಡಬೇಕು ಎಂದರು.
ಆರ್ ಎಸ್ ಎಸ್ ಗೆ ಪ್ರಶ್ನೆ ಕೇಳಿ ಪತ್ರ ಬರೆದಿದ್ದಕ್ಕೆ ಕೋರ್ಟ್ ಗೆ ಕೇಸು ಹಾಕಿ ಸಮನ್ಸ್ ಕಳಿಸುತ್ತಾರೆ, ರಾಮ ಮಂದಿರ ದೇಣಿಗೆ ವಿಚಾರದಲ್ಲಿ ಏಕೆ ಮೌನವಾಗಿದ್ದಾರೆ,
ತಾರ್ಕಿಕವಾಗಿ ಆರ್ ಎಸ್ ಎಸ್ ನ್ನು ಪ್ರಶ್ನೆ ಮಾಡಿದಾಗ ಪ್ರತಿ ಬಾರಿಯೂ ನಮ್ಮನ್ನು ಮೌನವಾಗಿಸಲು ಪ್ರಚೋದನೆ ಮಾಡಲು ಈ ರೀತಿ ಸಮನ್ಸ್ ಕಳುಹಿಸುತ್ತಾರೆ, ಇದು ನಮಗೇನು ಹೊಸದಲ್ಲ ಎಂದರು. ಕಾನೂನುಬದ್ಧವಾಗಿ, ತಾರ್ಕಿಕವಾಗಿ ನಮಗೆ ಉತ್ತರ ನೀಡಲು ಸಾಧ್ಯವಾಗದಾಗ ಈ ರೀತಿ ನಮ್ಮ ಬಾಯಿ ಮುಚ್ಚಿಸಲು ಬಿಜೆಪಿ, ಆರ್ ಎಸ್ ಎಸ್ ನವರು ಹೀಗೆ ಮಾಡುತ್ತಾರೆ ಎಂದರು.
ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಆರ್ ಎಸ್ ಎಸ್ ನ ಇರುವಿಕೆ ಬಗ್ಗೆ ಪ್ರಶ್ನಿಸಿದಾಗ ಈ ರೀತಿ ವರ್ತಿಸುತ್ತಾರೆ, ಸಂವಿಧಾನಬದ್ಧವಾಗಿ ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.