ಬೆಂಗಳೂರು: ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾಗೌಡ ಮತ್ತು ಇತರರಿಗೆ ಕರ್ನಾಟಕ ಹೈಕೋರ್ಟ್ ಶಾಕ್ ನೀಡಿದ್ದು, 'ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಮನೆ ಊಟ, ಕೋರಿಕೆ ಮೇರೆಗೆ ಅಲ್ಲ' ಎಂದು ಖಡಕ್ ಸಂದೇಶ ನೀಡಿದೆ.
ಹೌದು.. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಹಾಗೂ ಲಕ್ಷ್ಮಣ್ ಮೂವರು ಆರೋಪಿಗಳಿಗೆ ಮನೆ ಊಟಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ವಾರಕ್ಕೊಮ್ಮೆ ಹಾಗೂ ವೈದ್ಯಕೀಯ ಕಾರಣಗಳಿಂದ ಮನೆ ಊಟ ತರಿಸಿಕೊಳ್ಳಬಹುದು ಎಂಬ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್ ಮನೆ ಊಟ ನೀಡುವಂತಿಲ್ಲ ಎಂದು ಆದೇಶಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಪವಿತ್ರಾಗೌಡ ಸೇರಿ ಕೆಲವು ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾರೆ. 57ನೇ ಟ್ರಯಲ್ ಕೋರ್ಟ್ಗೆ ಅರ್ಜಿ ಹಾಕಿದ್ದ ಪವಿತ್ರಾಗೌಡ, ನಾಗರಾಜು ಮತ್ತು ಲಕ್ಷ್ಮಣ್ಗೆ ಮನೆ ಊಟ ಬರುತ್ತಿತ್ತು.
ವೈದ್ಯಕೀಯ ಕಾರಣ ಹಾಗೂ ವಾರಕ್ಕೊಮ್ಮೆ ಮನೆ ಊಟ ತರಿಸಿಕೊಳ್ಳಬಹುದೆಂದು ಟ್ರಯಲ್ ಕೋರ್ಟ್ ಆದೇಶಿಸಿತ್ತು. ಅದರಂತೆ ಈ ಮೂರು ಆರೋಪಿಗಳು ಮನೆ ಊಟ ಸೌಲಭ್ಯ ಪಡೆಯುತ್ತಿದ್ದರು. ಇದನ್ನು ವಿರೋಧಿಸಿದ್ದ ಜೈಲಾಧಿಕಾರಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಕೋರ್ಟ್ ಹೇಳಿದ್ದೇನು?
ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. 'ಕೇವಲ ವಿಚಾರಣಾಧೀನ ಕೈದಿಗಳ ವೈಯಕ್ತಿಕ ಮನವಿ ಅಥವಾ ಇಷ್ಟದ ಮೇರೆಗೆ ಮನೆಯೂಟ ನೀಡುವುದು ಕಾನೂನುಬದ್ಧವಾಗಿ ಸರಿಯಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ವೈದ್ಯರ ಅಧಿಕೃತ ಸಲಹೆ ಇಲ್ಲದೆ ಇಂತಹ ಸೌಲಭ್ಯ ನೀಡುವುದು ಸೂಕ್ತವಲ್ಲ' ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ಕಳವಳ
ವಿಚಾರಣೆ ವೇಳೆ ನ್ಯಾಯಾಲಯವು ಒಂದು ಪ್ರಮುಖ ಅಂಶವನ್ನು ಎತ್ತಿ ತೋರಿಸಿದ್ದು, 'ಜೈಲಿನಲ್ಲಿರುವ ಕೆಲವು ಪ್ರಭಾವಿ ಕೈದಿಗಳಿಗೆ ಮಾತ್ರ ಮನೆಯೂಟದ ಅವಕಾಶ ನೀಡಿದರೆ, ಅದು ಇತರ ಸಾಮಾನ್ಯ ಕೈದಿಗಳ ನಡುವೆ ತಾರತಮ್ಯ ಎಸಗಿದಂತೆ ಆಗುತ್ತದೆ. ಜೈಲು ನಿಯಮಾವಳಿಗಳು ಎಲ್ಲರಿಗೂ ಸಮಾನವಾಗಿರಬೇಕು' ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ವೈದ್ಯರ ಶಿಫಾರಸು ಇದ್ದಲ್ಲಿ ಮಾತ್ರ ಜೈಲು ಅಧಿಕಾರಿಗಳಿಗೆ ಮನೆಯೂಟಕ್ಕಾಗಿ ಮತ್ತೆ ಮನವಿ ಸಲ್ಲಿಸಲು ಅವಕಾಶವಿದೆ ಎಂದು ಕೋರ್ಟ್ ತಿಳಿಸಿದೆ.
ಜೈಲು ಊಟದ ಗುಣಮಟ್ಟದ ಮೇಲೆ ಹೈಕೋರ್ಟ್ ಕಣ್ಣು
ಅಂತೆಯೇ ಜೈಲಿನಲ್ಲಿ ಕೈದಿಗಳಿಗೆ ನೀಡುವ ಊಟದ ಗುಣಮಟ್ಟದ ಬಗ್ಗೆಯೂ ಹೈಕೋರ್ಟ್ ಗಂಭೀರವಾಗಿ ಚರ್ಚಿಸಿದ್ದು, ಈ ಹಿಂದೆ ಒಬ್ಬ ಕೈದಿಯ ದಿನದ ಊಟದ ವೆಚ್ಚ 82 ರೂಪಾಯಿ ಇತ್ತು, ಈಗ ಅದನ್ನು 125 ರೂಪಾಯಿಗೆ ಏರಿಸಲಾಗಿದೆ ಎಂದು ಎಸ್ಪಿಪಿ ಜಗದೀಶ್ ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕೋರ್ಟ್, 'ವೆಚ್ಚವನ್ನು 125 ರೂಪಾಯಿಗೆ ಹೆಚ್ಚಿಸಿದರೂ ಊಟದ ಗುಣಮಟ್ಟದ ಪರಿಶೀಲನೆ ಅತ್ಯಗತ್ಯ' ಎಂದು ಹೇಳಿದೆ.