ಮೈಸೂರು: ವೃತ್ತಿ ಬದ್ಧತೆ, ಮಾನವೀಯತೆ, ಕರ್ತವ್ಯನಿಷ್ಠೆಗೆ ಅನ್ವರ್ಥವೆಂಬಂತೆ ಮೈಸೂರು ಜಿಲ್ಲೆಯ ಸರಕಾರಿ ಪ್ರೌಢಶಾಲೆ ಜಿ.ಬಿ. ಸರಗೂರಿನ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಅವರು ನಡೆದುಕೊಂಡಿದ್ದಾರೆ.
ಜ್ಯೋತಿ ಅವರ ಪತಿ ಕಿರಣ್ ಕುಮಾರ್ (47ವ) ಮೊನ್ನೆ 25ರಂದು ನಿಧನರಾಗಿದ್ದಾರೆ. ಪತಿಯ ಹಠಾತ್ ನಿಧನದಿಂದ ಕುಗ್ಗದ ಜ್ಯೋತಿ ಅವರು ತಮ್ಮ ವೈಯಕ್ತಿಕ ನೋವನ್ನು ಮರೆತು, ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯವೆಂದು ಮರುದಿನ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜ್ಯೋತಿ ಅವರು ಗಣಿತ ಪಾಠ ಶಿಕ್ಷಕಿಯಾಗಿದ್ದಾರೆ.
ಮಾರ್ಚ್ 28ರಂದು ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು, ಪತಿಯ ಮರಣದ ಮರು ದಿನವೇ ಶಾಲೆಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತೆ ಮಾಡಿಸಿದ್ದಾರೆ. ಗಣಿತ ಶಿಕ್ಷಕಿಯಾಗಿರುವ ಜ್ಯೋತಿ ಅವರು, “ಪ್ರತಿ ವಿದ್ಯಾರ್ಥಿಯೂ ತೇರ್ಗಡೆಯಾಗಬೇಕು” ಎಂಬ ದೃಢ ಸಂಕಲ್ಪದೊಂದಿಗೆ ತರಗತಿಗೆ ಬಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅವರ ಈ ಕರ್ತವ್ಯಪ್ರಜ್ಞೆಗೆ ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಊರವರು, ಹಳೆ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜ್ಯೋತಿ ಅವರು ಸಮಾಜದ ಇತರ ಶಿಕ್ಷಕರಿಗೆ ಪ್ರೇರಣೆಯಾಗಲಿ ಎಂದು ಹೆಚ್ ಡಿ ಕೋಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎನ್ ರಾಜು ಹೇಳಿದ್ದಾರೆ.
ಪತಿಯ ಸಾವಿನ ನೋವಿನಲ್ಲಿ ನಾನಿದ್ದೇನೆ ನಿಜ. ಆದರೆ ಮಕ್ಕಳ ಭವಿಷ್ಯ ಮುಖ್ಯವಲ್ಲವೇ. ನನ್ನ ಮಕ್ಕಳ ಬಗ್ಗೆ ಸಾಕಷ್ಟು ಕನಸು ಕಂಡಿದ್ದೇನೆ. ನನ್ನ ಗೈರು ಅವರ ಭವಿಷ್ಯಕ್ಕೆ ಮಾರಕವಾಗಬಾರದು ಎಂದು ಶಾಲೆಗೆ ಬಂದಿದ್ದೇನೆ. ವರ್ಷಪೂರ್ತಿ ಕಲಿತ ಮಕ್ಕಳ ಶ್ರಮ ನನ್ನ ಕಾರಣದಿಂದ ಹಾಳಾಗಬಾರದು, ಮನೆಯಲ್ಲಿ ಕುಳಿತರೆ ನನ್ನ ದುಃಖ ಇನ್ನೂ ಹೆಚ್ಚಾಗುತ್ತದೆ, ಇಲ್ಲಿ ಮಕ್ಕಳ ಮುಖ ನೋಡಿ ದುಃಖ ಮರೆಯಲು ಪ್ರಯತ್ನಿಸುತ್ತೇನೆ ಎಂದು ಜ್ಯೋತಿ ಹೇಳಿದ್ದಾರೆ.