ಮೈಸೂರು: ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ತೃತೀಯ ಭಾಷೆಯನ್ನು ಕಡ್ಡಾಯವಲ್ಲ ಎಂದು ಘೋಷಿಸಿದೆ. ಈ ಬಗ್ಗೆ ನಿನ್ನೆ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಹಿಂದಿ ಕಲಿಯಬಾರದು ಎಂದು ಹೇಳುತ್ತಿಲ್ಲ. ಕಡ್ಡಾಯ ಬೇಡ ಎಂದು ಹೇಳುತ್ತಿದ್ದೇನೆ. ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ ಮಾಡಬಾರದು ಎಂದರು.
ಸರ್ಕಾರದ ಈ ನಿರ್ಧಾರವನ್ನ ಎಲ್ಲರೂ ಒಪ್ಪಿಕೊಳ್ಳಬೇಕು. ಯಾರೋ ಕೆಲವರು ವಿರೋಧಿಸಿದರೆ ಹಿಂದೆ ಸರಿಯಲ್ಲ. ಎಲ್ಲ ರೀತಿ ಪರಾಮರ್ಶಿಸಿ ಸರ್ಕಾರ ನಿರ್ಧಾರ ಮಾಡಿದೆ. ಎಲ್ಲರೂ ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕು. ಈ ವರ್ಷದಿಂದಲೇ ಪರೀಕ್ಷೆಯಲ್ಲಿ ಇದು ಜಾರಿ ಬರುತ್ತದೆ ಎಂದರು.
ದ್ವಿಭಾಷಾ ನೀತಿ ಇನ್ನೂ ಜಾರಿಗೆ ಬಂದಿಲ್ಲ, ಈಗ ಕೇವಲ ತೀರ್ಮಾನ ಮಾಡಿದ್ದೇವೆ, 10ನೇ ತರಗತಿ ಪರೀಕ್ಷೆಯಲ್ಲಿ 625 ಅಂಕಗಳಿಂದ 525 ಅಂಕಗಳಿಗೆ ಇಳಿಕೆ ಮಾಡಿದ್ದೇವೆ. ಈ ವರ್ಷದಿಂದಲೇ ಜಾರಿಗೆ ತರುತ್ತೇವೆ ಎಂದರು.
ಸರ್ಕಾರದ ತೀರ್ಮಾನಕ್ಕೆ ವಿರೋಧಿಸುವವರೂ ಇರುತ್ತಾರೆ, ಸ್ವಾಗತ ಮಾಡುವವರು ಕೂಡ ಇರುತ್ತಾರೆ. ಶೇಕಡಾ 100ರಷ್ಟು ಸ್ವಾಗತಿಸುವವರು ಸಿಗುವುದು ಕಡಿಮೆ. ನೋಡೋಣ ಎಂದರು.
ಸರ್ಕಾರ ರಾಜ್ಯದಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ಸಮರ ಸಾರಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತಗೊಳಿಸುವುದು ನಮ್ಮ ಉದ್ದೇಶ. ಮೈಸೂರಿನಲ್ಲಿ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿರುವ ಬಗ್ಗೆ ತಿಳಿದುಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೈಸೂರಿನಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಟ್ರಾಫಿಕ್ ಸಿಗ್ನಲ್ಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ದೂರುಗಳು ಕೇಳಿಬರುತ್ತಿದ್ದಲ್ಲಿ ಸಂಬಂಧಪಟ್ಟವರಿಂದ ಅಗತ್ಯ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದರು.