ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ 45 ವರ್ಷದ ಶಹನವಾಜ್ ಪ್ರಕರಣದಲ್ಲಿ ಯಾವುದೇ ವೈದ್ಯಕೀಯ ನಿರ್ಲಕ್ಷ್ಯ ನಡೆದಿಲ್ಲ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ರಚಿಸಿದ್ದ ತನಿಖಾ ಸಮಿತಿ ಸ್ಪಷ್ಟಪಡಿಸಿದೆ.
ಫೋರ್ನಿಯರ್ ಗ್ಯಾಂಗ್ರಿನ್ ಮತ್ತು ನಿಯಂತ್ರಣ ತಪ್ಪಿದ ಮಧುಮೇಹದಿಂದ ಬಳಲುತ್ತಿದ್ದ ಶಹನವಾಜ್ ಅವರನ್ನು ಫೆಬ್ರವರಿ 19ರಿಂದ ಮಾರ್ಚ್ 3ರವರೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಏಪ್ರಿಲ್ 22ರಂದು ಚಿಕಿತ್ಸೆ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು.
ಜನರಲ್ ಮೆಡಿಸಿನ್, ಜನರಲ್ ಸರ್ಜರಿ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಹಿರಿಯ ಪ್ರಾಧ್ಯಾಪಕರನ್ನೊಳಗೊಂಡ ಸಮಿತಿ, ವೈದ್ಯಕೀಯ ದಾಖಲೆಗಳು, ಚಿಕಿತ್ಸೆಗಳು, ಡಿಸ್ಚಾರ್ಜ್ ಸಾರಾಂಶ ಹಾಗೂ ಕುಟುಂಬದವರ, ವೈದ್ಯರು ಮತ್ತು ಸಿಬ್ಬಂದಿಯ ಹೇಳಿಕೆಗಳನ್ನು ಪರಿಶೀಲಿಸಿದೆ.
ತನಿಖಾ ವರದಿ ಪ್ರಕಾರ, ರೋಗಿಗೆ ಸಮಯಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗಿದ್ದು, ಗಾಯ ಶುದ್ಧೀಕರಣ (ಡಿಬ್ರೈಡ್ಮೆಂಟ್), ನಿಯಮಿತ ಡ್ರೆಸಿಂಗ್, ಆ್ಯಂಟಿಬಯೋಟಿಕ್ ಚಿಕಿತ್ಸೆ ಹಾಗೂ ಮಧುಮೇಹ ನಿಯಂತ್ರಣ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲಾಗಿತ್ತು. ನಿಯಮಿತವಲ್ಲದ ಸಮಯಗಳನ್ನು ಒಳಗೊಂಡಂತೆ ಚಿಕಿತ್ಸೆಯು ಯಾವುದೇ ಅಡಚಣೆಯಿಲ್ಲದೆ ಮುಂದುವರೆದಿದೆ ಎಂದು ತನಿಖಾ ಸಮಿತಿ ತಿಳಿಸಿದೆ.
ಫೋರ್ನಿಯರ್ ಗ್ಯಾಂಗ್ರಿನ್ ಪ್ರಕರಣಗಳಲ್ಲಿ ಗಾಯವನ್ನು ತಕ್ಷಣ ಮುಚ್ಚದೇ ತೆರೆಯೇ ಇಡುವುದು ಸಾಮಾನ್ಯ ವಿಧಾನವಾಗಿದ್ದು, ಅದು ಆರೋಗ್ಯಕರ ಸ್ಥಿತಿಗೆ ಬಂದ ನಂತರ ಮತ್ತೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ಸಮಿತಿ ಸ್ಪಷ್ಟಪಡಿಸಿದೆ. ಇದೇ ವೇಲೆ ರೋಗಿಯನ್ನು ಬಲವಂತವಾಗಿ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಆರೋಪವನ್ನು ಸಮಿತಿ ನಿರಾಕರಿಸಿದೆ.
ಮಾರ್ಚ್ 3ರಂದು ಸ್ಥಿರ ಸ್ಥಿತಿಯಲ್ಲಿ ಡಿಸ್ಚಾರ್ಜ್ ಮಾಡಲಾಗಿದ್ದ ನವಾಜ್, ನಂತರ ಮಾರ್ಚ್ 15ರಂದು ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಗೂ ಅವರ ಸಾವಿಗೆ ನೇರ ಸಂಬಂಧವಿಲ್ಲ ಎಂದು ಸಮಿತಿ ತಿಳಿಸಿದೆ.