ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಆದಾಯ 10 ವರ್ಷಗಳ ಹಿಂದೆ ಏನೂ ಇರಲಿಲ್ಲ. ಬಿಜೆಪಿಯವರು ಲಕ್ಷಾಂತರ ಕೋಟಿ ರೂಪಾಯಿ ಕೊಟ್ಟು ಇಡೀ ದೇಶವನ್ನು ಅದಾನಿ, ಅಂಬಾನಿಗೆ ಮಾರಾಟ ಮಾಡಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ನ್ನು ಟೀಕಿಸುವ ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಪರಿವಾರ ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ, ಜೀವ ಬಲಿದಾನ ಮಾಡಿದ್ದಾರೆ. ಮೋದಿಯವರು ಧರಿಸುವ ಡ್ರೆಸ್ ಎಷ್ಟು ಬೆಲೆಬಾಳುತ್ತದೆ, ಅವರ ವಿದೇಶ ಪ್ರಯಾಣದ ಖರ್ಚನ್ನು ದೇಶದ ಜನತೆ ಮುಂದಿಡಲಿ ಎಂದರು.
ಸುಳ್ಳು, ಮೋಸ, ವಂಚನೆ ಬಿಜೆಪಿಯರ ಅಭ್ಯಾಸ, ವಿದೇಶದಿಂದ ಕಪ್ಪು ಹಣ ತಂದರಾ, ರೈತರ ಆಧಾಯ ದುಪ್ಪಟ್ಟಾಯಿತಾ, ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದಾರಾ, ಎಲ್ಲಾ ಬಡವರಿಗೆ ಮನೆ ಕೊಡುತ್ತೇವೆ ಎಂದು ಭರವಸೆ ಕೊಟ್ಟರೇ ಹೊರತು ಅದು ನಿಜವಾಗಲಿಲ್ಲ ಎಂದರು.
ಈಗ ಪೆಟ್ರೋಲ್-ಡೀಸೆಲ್ ದರ ಹೆಚ್ಚಿಸಿದ್ದಾರೆ, ಯುದ್ಧದ ಕಷ್ಟದ ಪರಿಸ್ಥಿತಿಗೆ ಏನು ಸಿದ್ಧತೆ ಮಾಡಿಕೊಂಡರು. ಅಜಿತ್ ಪವಾರ್ 75 ಸಾವಿರ ಕೋಟಿ ರೂಪಾಯಿ ಲೂಟಿ ಹೊಡೆದರು ಎಂದು ಹೇಳಿದಿರಿ, ನಂತರ ಅವರನ್ನೇ ಡಿಸಿಎಂ ಮಾಡಿದರು. ಸುವೇಂದು ಅಧಿಕಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಹಿರಂಗವಾಗಿಯೇ ಆರೋಪ ಮಾಡಿದ್ದಿರಿ, ಇಂದು ಅವರನ್ನೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಾಡಿದರು, ಅಸ್ಸಾಂ ಮುಖ್ಯಮಂತ್ರಿ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ನಂತರ ಮುಖ್ಯಮಂತ್ರಿ ಮಾಡಿದರು, ನೀವು ಮಾಧ್ಯಮದವರು ಬಿಜೆಪಿಯವರನ್ನು ಪ್ರಶ್ನೆ ಮಾಡಬೇಕೆಂದರು.
ಕೇರಳದಲ್ಲಿ ಕೆ ಸಿ ವೇಣುಗೋಪಾಲ್ ಹಿರಿಯ ನಾಯಕರು, ಎಲ್ಲರನ್ನೂ ಕೂಡಿ ಚರ್ಚಿಸಿ ಮುಖ್ಯಮಂತ್ರಿ ಆಯ್ಕೆ ನಡೆದಿದೆ ಎಂದರು. ಕರ್ನಾಟಕ ಬಿಜೆಪಿ ನಾಯಕರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಸಂಪೂರ್ಣ ನಾಶವಾಗಿದೆ, ಅದನ್ನು ಸುಧಾರಣೆ ಮಾಡುವ ಬದಲು ಕಾಂಗ್ರೆಸ್ ನ್ನು ಟೀಕಿಸುತ್ತಿದ್ದಾರೆ ಎಂದರು.