ಉಡುಪಿ: ಪತ್ನಿ ಮತ್ತು ಮಾವ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಉಡುಪಿ ಮೂಲದ ಉದ್ಯಮಿಯೋರ್ವ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೈಂದೂರು ತಾಲೂಕಿನ ನಾಡಾ ಗ್ರಾಮದ ನಿವಾಸಿ ಸುಧಾಕರ್ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದು, ಇಲ್ಲಿನ ವಂದ್ಸೆ ಸೇತುವೆ ಸಮೀಪದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೂ ಕೆಲವೇ ಕ್ಷಣಗಳ ಮೊದಲು ಹಾಕಿದ್ದ ಸುಧಾಕರ್ ಶೆಟ್ಟಿ ವಾಟ್ಸಾಪ್ ಸ್ಟೇಟಸ್ದ್ದರು. ಅದರಲ್ಲಿ ತನ್ನ ಪತ್ನಿ ಗುಣರತ್ನ ಹಾಗೂ ಮಾವ ನಾಗರಾಜ್ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತನ್ನ ಸಾವಿನ ನಂತರ ಮಕ್ಕಳನ್ನು ಸಂಬಂಧಿಕರು ನೋಡಿಕೊಳ್ಳುವಂತೆ ಕೂಡ ಅವರು ಮನವಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸುಧಾಕರ್ ಶೆಟ್ಟಿ ಅವರು ಈ ಹಿಂದೆ ಮುಂಬೈನಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದು, ಸುಮಾರು ಒಂದು ವರ್ಷದ ಹಿಂದಷ್ಟೇ ಸ್ವಗ್ರಾಮಕ್ಕೆ ಮರಳಿದ್ದರು. ಅವರು ತಮ್ಮ ಪತ್ನಿಯ ಊರಾದ ವಂದ್ಸೆಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ದಾಂಪತ್ಯ ಕಲಹ ಮತ್ತು ಕುಟುಂಬದ ಒಳಗಿನ ಭಿನ್ನಾಭಿಪ್ರಾಯಗಳು ಇತ್ತೀಚಿನ ತಿಂಗಳಲ್ಲಿ ಹೆಚ್ಚಾಗಿದ್ದವು ಎಂಬುದು ಗೊತ್ತಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.