ತುಮಕೂರು: ತುಮಕೂರು ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಆಘಾತಕಾರಿ ಘಟನೆಯೊಂದು ನಡೆದಿದೆ. ಒಂದು ತಿಂಗಳಿನಿಂದ ಕಾಣೆಯಾಗಿದ್ದ ಹದಿಹರೆಯದ ಯುವತಿಯನ್ನು ಆಕೆಯ ತಂದೆಯೇ ಕೊಲೆ ಮಾಡಿರುವುದು ಬಯಲಾಗಿದೆ. ಮೃತ ಯುವತಿಯನ್ನು 17 ವರ್ಷದ ಮೇಘನಾ ಎಂದು ಗುರುತಿಸಲಾಗಿದೆ.
ಶಿರಾ ತಾಲ್ಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಕೆಯ ಮದುವೆ ಬಗ್ಗೆ ಕುಟುಂಬದೊಳಗೆ ಪದೇ ಪದೇ ಜಗಳಗಳು ನಡೆಯುತ್ತಿದ್ದರಿಂದ ಆಕೆಯ ತಂದೆ ತಿಮ್ಮರಾಯಪ್ಪನೇ ಕೊಂದಿದ್ದಾರೆ ಎಂಬುದಕ್ಕೆ ತಮ್ಮ ಬಳಿ ಪುರಾವೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮೇಘನಾ ಏಪ್ರಿಲ್ 16 ರಂದು ನಾಪತ್ತೆಯಾಗಿದ್ದರು. ಆಕೆಯ ತಾಯಿ ನಿರ್ಮಲಾ ಸಂಜೆ 6:30 ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾದಾಗ ಮಗಳು ಇರಲಿಲ್ಲ. ಆಕೆಯ ಮೊಬೈಲ್ ಫೋನ್ಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅದು ಸ್ವಿಚ್ ಆಫ್ ಆಗಿತ್ತು. ಆಕೆ ಅನುಮಾನಗೊಂಡು ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದರು.
ಕೊಲೆಗೆ ಇದೇ ಕಾರಣ!
ಮೇಘನಾಳ ವಿವಾಹದ ಬಗ್ಗೆ ಕುಟುಂಬದಲ್ಲಿ ಆಗಾಗ್ಗೆ ಜಗಳಗಳು ನಡೆಯುತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ನಿರ್ಮಲಾ ಮತ್ತು ಅವರ ಕುಟುಂಬ ಸದಸ್ಯರು ಮೇಘನಾ ಅವರಿಗೆ 18 ವರ್ಷ ತುಂಬಿದ ನಂತರ ಸಂಬಂಧಿಕರ ಮಗನಿಗೆ ಮದುವೆ ಮಾಡಲು ಯೋಜಿಸುತ್ತಿದ್ದರು ಎನ್ನಲಾಗಿದೆ. ವರನ ಕುಟುಂಬವು ಈಗಾಗಲೇ ಮದುವೆಗಾಗಿ ಸೀರೆ ಮತ್ತು ಮಂಗಳಸೂತ್ರವನ್ನು ಖರೀದಿಸಿತ್ತು ಎನ್ನಲಾಗಿದೆ.
ಆದರೆ, ತಿಮ್ಮರಾಯಪ್ಪಗೆ ಪತ್ನಿಯ ಸಂಬಂಧಿಕರೊಂದಿಗೆ ಮಗಳನ್ನು ಕೊಟ್ಟು ಮದುವೆ ಮಾಡುವುದು ಇಷ್ಟವಿರಲಿಲ್ಲ. ಈ ಬಗ್ಗೆ ಕಳೆದ ನಾಲ್ಕೈದು ತಿಂಗಳಿನಿಂದ ಮನೆಯಲ್ಲಿ ಜಗಳ ನಡೆಯುತ್ತಲೇ ಇತ್ತು . ಈ ಮಧ್ಯೆ ಇದೇ ರೀತಿಯ ಜಗಳ ನಡೆದ ನಂತರ ಮೇಘನಾ ನಾಪತ್ತೆಯಾಗಿದ್ದರು. ಆಕೆಯ ತಂದೆ ಕೂಡ ನಾಪತ್ತೆಯಾಗಿದ್ದು, ಪ್ರಕರಣದಲ್ಲಿ ಅನುಮಾನವನ್ನು ಹುಟ್ಟುಹಾಕಿತು.
ಕೊಲೆಯ ನಂತರ ನಾಪತ್ತೆ ದೂರು: ಪೊಲೀಸರ ವಿಚಾರಣೆ ವೇಳೆ ತಿಮ್ಮರಾಯಪ್ಪ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಮೊದಲು ಮೇಘನಾಳನ್ನು ಬಾವಿಗೆ ತಳ್ಳಿ ನಂತರ ಆಕೆಯ ಮೇಲೆ ಕಲ್ಲು ಎಸೆದಿದ್ದಾನೆ. ಬಳಿಕ ಆಕೆಯ ಶವವನ್ನು ಬಾವಿಯಿಂದ ಹೊರತೆಗೆದು ನಿರ್ಜನ ಪ್ರದೇಶದಲ್ಲಿ ಉತ್ತಿಟ್ಟಿದ್ದಾನೆ. ಕೊಲೆ ಮಾಡಿದ ನಂತರ ತಿಮ್ಮರಾಯಪ್ಪ ತನ್ನ ಪತ್ನಿಯೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಅನುಮಾನ ಬರದಂತೆ ನಾಪತ್ತೆ ದೂರು ದಾಖಲಿಸಲು ಸಹಾಯ ಮಾಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.