ಶಿಮ್ಲಾ: ಪರಿಹಾರ ನೀಡದ್ದಿದ್ದರೆ ಉನಾ-ದೆಹಲಿ ಜನ ಶತಾಬ್ದಿ ರೈಲನ್ನೇ ಜಪ್ತಿ ಮಾಡಿಕೊಳ್ಳುವಂತೆ ರೈತರಿಬ್ಬರಿಗೆ ಉನಾ ಜಿಲ್ಲಾ ನ್ಯಾಯಧೀಶರು ವಾರಂಟ್ ಹೊರಡಿಸಿದ್ದಾರೆ.
ದಿಲ್ವಾನ್ ಗ್ರಾಮದ ಮದನ್ ಲಾಲ್ ಹಾಗೂ ಮೇಲಾರಾಮ್ ಎಂಬ ಇಬ್ಬರು ರೈತರಿಗೆ ಕೊಡಬೇಕಾಗಿರುವ ಪರಿಹಾರ ನೀಡುವಲ್ಲಿ ರೈಲ್ವೆ ಇಲಾಖೆ ವಿಫಲವಾದರೆ ಏಪ್ರಿಲ್ 16ರಂದು ಜನ್ ಶತಾಬ್ದಿ ರೈಲನ್ನು ಜಪ್ತಿ ಮಾಡಿಕೊಳ್ಳತಕ್ಕದ್ದು ಎಂದು ಉನಾ ಜಿಲ್ಲಾ ಸತ್ರ ನ್ಯಾಯಾಧೀಶ ಮುಖೇಶ್ ಬನ್ಸಾಲ್ ಗುರುವಾರ ವಾರಂಟ್ ಹೊರಡಿಸಿದ್ದಾರೆ. ಏ.9ರಂದು ನ್ಯಾಯಾಲಯ ಹೊರಡಿಸಿದ್ದ ಆದೇಶದಲ್ಲಿ ಏ.16ರೊಳಗೆ ಇಬ್ಬರು ರೈತರಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಾಗಿ ಸೂಚಿಸಿತ್ತು.
ಅಂಬಾಲ ವಿಭಾಗೀಯ ಮ್ಯಾನೇಜರ್ ಕಚೇರಿಯಿಂದ ಇದುವರೆಗೂ ಆ ಬಗ್ಗೆ ಯಾವುದೇ ಮಾಹಿತಿಯೂ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟ್ ಇಂದು ಉನಾ-ದೆಹಲಿ ಜನ ಶತಾಬ್ದಿ ರೈಲು ಜಪ್ತಿಗೆ ವಾರಂಟ್ ನೀಡಿತು.
ಕಳೆದ 1998ರಲ್ಲಿ ರೈಲ್ವೆ ಹಳಿ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ದಿಲ್ವಾನ್ ಗ್ರಾಮದ ಮದನ್ ಲಾಲ್ ಹಾಗೂ ಮೇಲಾರಾಮ್ ಎಂಬುವವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೆ ರೈತರಿಗೆ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ವರ್ಷಗಳೆ ಕಳೆದರೂ ಬಡ ರೈತರಿಗೆ ಪರಿಹಾರ ದೊರೆಯಲಿಲ್ಲ. ಇದರಿಂದಾಗಿ 2011ರಲ್ಲಿ ಈ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದರು.
2013ರಲ್ಲಿ ಜಿಲ್ಲಾ ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ರೈತರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದು, ಜಿಲ್ಲಾ ನ್ಯಾಯಾಲಯದ ಮೂಲಕ ಹಣ ಸಂದಾಯ ಮಾಡುವಂತೆ ನಿರ್ಧರಿಸಿತ್ತು. ಮದನ್ ಲಾಲ್ಗೆ 25.54 ಲಕ್ಷ ಹಾಗೂ ಮೇಲಾರಾಮ್ಗೆ 8.91 ಲಕ್ಷ ರು. ಪರಿಹಾರವನ್ನು ಏ.15ರೊಳಗೆ ಕೊಡಬೇಕು ಎಂದು ಸೂಚಿಸಲಾಗಿತ್ತು. ಆದರೆ ನಿನ್ನೆಯವರೆಗೂ ರೈಲ್ವೆ ಇಲಾಖೆ ಯಾವ ಕ್ರಮವನ್ನು ತೆಗೆದುಕೊಂಡಿರದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶರು ಇಂದು ಈ ವಾರಂಟ್ ಹೊರಡಿಸಿದ್ದಾರೆ.