ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ವಿದೇಶ ಪ್ರವಾಸದಲ್ಲಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಬುಲಾವ್ ನೀಡಿದ ಬೆನ್ನಲ್ಲೇ, ಲೆಫ್ಟಿನೆಂಟ್ ಗವರ್ನರ್ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಶನಿವಾರ ಆಪ್ ಸರ್ಕಾರ ಆರೋಪಿಸಿದೆ.
ರಾಷ್ಟ್ರರಾಜಧಾನಿಯಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಫಿನ್ ಲ್ಯಾಂಡ್ ಪ್ರವಾಸ ಮೊಟಕುಗೊಳಿಸಿ, ತಕ್ಷಣ ವಾಪಸ್ ಬರುವಂತೆ ನಿನ್ನೆ ನಜೀಬ್ ಜಂಗ್ ಅವರು ಫ್ಯಾಕ್ಸ್ ಮೂಲಕ ಸಿಸೋಡಿಯಾಗೆ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹಾಗೂ ಜಲ ಸಚಿವ ಕಪಿಲ್ ಮಿಶ್ರಾ ಅವರು ರಾಜಭನಕ್ಕೆ ದಾವಿಸಿದ್ದರು. ಆದರೆ ನಜೀಬ್ ಜಂಗ್ ಅವರು ರಜೆಯಲ್ಲಿದ್ದುದ್ದರಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ,
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, ಲೆಫ್ಟಿನೆಂಟ್ ಗವರ್ನರ್ ರಜೆಯಲ್ಲಿದ್ದಾರೆ ಎಂದು ನಮಗೆ ತಿಳಿಸಲಾಗಿದೆ. ಆದರೆ ದೆಹಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅವರು ರಜೆ ಮೇಲೆ ತೆರಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅವರು ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
ದೆಹಲಿಯಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಜಂಗ್ ಅವರು ಈ ತಿಂಗಳ ಆರಂಭದಲ್ಲಿ 10 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರು ಏಕೆ ತಮ್ಮ ಪ್ರವಾಸವನ್ನು ಮೊಟಕುಗೊಳಿಸಲಿಲ್ಲ ಎಂದು ಮತ್ತೊಬ್ಬ ಸಚಿವ ಸತ್ಯೇಂದ್ರ ಜೈನ್ ಅವರು ಪ್ರಶ್ನಿಸಿದ್ದಾರೆ.