ದೇಶ

ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆ: ತಮಿಳುನಾಡಿನಾದ್ಯಂತ ಭಾರೀ ಭದ್ರತೆ

Sumana Upadhyaya
ಚೆನ್ನೈ:ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಕೇಸಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿನಾದ್ಯಂತ ತೀವ್ರ ಭದ್ರತೆ ಒದಗಿಸಲಾಗಿದೆ. 
ಚೆನ್ನೈನ ಶಶಿಕಲಾ ಅವರ ಪೊಯೆಸ್ ಗಾರ್ಡನ್ ನಿವಾಸದ ಹೊರಗೆ ತೀವ್ರ ಭದ್ರತೆ ಏರ್ಪಡಿಸಲಾಗಿದೆ. ಇನ್ನೊಂದೆಡೆ ಶಶಿಕಲಾ ಅವರು ಎಐಎಡಿಎಂಕೆ ಶಾಸಕರು ಉಳಿದುಕೊಂಡಿರುವ ಗೋಲ್ಡನ್ ಬೆ ರೆಸಾರ್ಟ್ ನಲ್ಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಎಂ.  ತಂಬಿದುರೈ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರ ಗ್ರೀನ್ ವೇ ರಸ್ತೆ ಬಳಿ ಇರುವ ನಿವಾಸದ ಹೊರಗೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಅಲ್ಲದೆ ರಾಜಭವನ ಹಾಗೂ ಶಾಸಕರು ಉಳಿದುಕೊಂಡಿರುವ ಕೊವತೂರು ರೆಸಾರ್ಟ್ ಹೊರಗೆ ಕೂಡ ತೀವ್ರ ಭದ್ರತೆ ಕಲ್ಪಿಸಲಾಗಿದೆ.
ಜೆ.ಜಯಲಲಿತಾ ಅವರ ನಿಧನದ ನಂತರ ಮುಖ್ಯಮಂತ್ರಿ ಗಾದಿಗಾಗಿ ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ವಿರುದ್ಧ ಹೋರಾಡುತ್ತಿರುವ ಶಶಿಕಲಾ ಅವರ ರಾಜಕೀಯ ಭವಿಷ್ಯ ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಮೇಲೆ ನಿಂತಿದೆ. 
ಅಕ್ರಮ ಆಸ್ತಿ ಗಳಿಕೆ ಕೇಸಿನಡಿ ಜಯಲಲಿತಾ ಸೇರಿದಂತೆ ಶಶಿಕಲಾ ಮತ್ತು ಅವರ ಸಂಬಂಧಿಕರಾದ ವಿ.ಎನ್.ಸುಧಾಕರನ್, ಎಲವರಸಿ ಅವರನ್ನು  ಕರ್ನಾಟಕ ಹೈಕೋರ್ಟ್ ಖುಲಾಸೆಗೊಳಿಸಿತ್ತು.
SCROLL FOR NEXT