ದೇಶ

ದೇಶದಲ್ಲಿ ಇರಬೇಕಾದರೆ ವಂದೇ ಮಾತರಂ ಹಾಡಲೇಬೇಕು: ಮಹಾರಾಷ್ಟ್ರ ಸಚಿವ

Manjula VN
ಶಿರಡಿ: ಭಾರತ ದೇಶದಲ್ಲಿರಲು ಬಯಸುವವರು ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎಂದು ಹೇಳುವುದು ಕಡ್ಡಾಯ ಎಂದು ಮಹಾರಾಷ್ಟ್ರ ಲೋಕೋಪಯೋಗಿ ಸಚಿವಚ ಚಂದ್ರಕಾಂತ್ ಪಾಟೀಲ್ ಅವರು ಶನಿವಾರ ಹೇಳಿದ್ದಾರೆ. 
ಸಾಯಿಬಾಬಾ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಂದೇ ಮಾತರಂನ ಅರ್ಥ ದೇಶದ ಮಣ್ಣಿಗೆ ಪ್ರಣಾಮ ಸಲ್ಲಿಸುವುದಾಗಿದೆ. ವಂದೇ ಮಾತರಂ ಹಾಡುವುದರಿಂದ ಏನು ಸಮಸ್ಯೆ ಇದೆ ಎನ್ನುವುದು ನನಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. 
ದೇಶದಲ್ಲಿರಬೇಕಾದರೆ ವಂದೇ ಮಾತರಂ ಹಾಗೂ ಭಾರತ ಮಾತಾ ಕಿ ಜೈ ಎಂದು ಹೇಳಲೇಬೇಕು. ಭಾರತ ದೇಶದಲ್ಲಿ ವಾಸಿಸುವ ಎಲ್ಲರಿಗೂ ತಮ್ಮ ಧರ್ಮಕ್ಕೆ ಅನುಗುಣವಾಗಿ ಪೂಜಿಸಲು ಅವಕಾಶವಿದೆ. ಆದರೆ, ದೇಶದ ಮಣ್ಣಿಗೂ ಅವರು ವಿಧೇಯರಾಗಿರಬೇಕು. ವಂದೇ ಮಾತರಂ ಎನ್ನುವುದು ಯಾವುದೇ ದೇವರ ಸ್ತುತಿಯಲ್ಲ. ಅಲ್ಲಾಹನ ಜೊತೆಗೆ ತಂದೆ-ತಾಯಿಯನ್ನು ಗೌರವಿಸುವಂತೆ ಮಾತೃಭೂಮಿಯನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ. 
ತಮಿಳುನಾಡಿನ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಂದೇ ಮಾತರಂ ಕಡ್ಡಾಯಗೊಳಿಸಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲೂ ಅದನ್ನು ಕಡ್ಡಾಯಗೊಳಿಸುವಂತೆ ಬಿಜೆಪಿ ಶಾಸಕ ರಾಜಪುರೋಹಿತ್ ಅವರು ಈ ಹಿಂದೆ ಆಗ್ರಹಿಸಿದ್ದರು. 
ಇದಕ್ಕೆ ಎಐಎಂಐಎಂ ಶಾಸಕ ವಾರಿಸ್ ಪಠಾಣ್ ಹಾಗೂ ಸಮಾಜವಾದಿ ಪಕ್ಷದ ಮಹಾರಾಷ್ಟ್ರದ ಘಟಕದ ಅಧ್ಯಕ್ಷ ಅಬು ಅಸೀಂ ಅಜ್ಮಿ ಅವರು ವಿರೋಧ ವ್ಯಕ್ತಪಡಿಸಿದ್ದರು. 
SCROLL FOR NEXT