ನವದೆಹಲಿ: ರೈತರ ಸಾಲ ಮನ್ನಾ ಮಾಡುವುದು ಫ್ಯಾಶನ್ ಆಗಿದೆ ಎಂಬ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿಕೆ ದುರದೃಷ್ಟಕರ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ. ಸಚಿವರು ರೈತರ ಕ್ಷಮೆ ಕೇಳಬೇಕೆಂದು ಪಕ್ಷ ಒತ್ತಾಯಿಸಿದೆ.
ಸಾಲದ ಹೊರೆಯನ್ನು ತಾಳಲಾರದೆ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡರೆ ಇನ್ನು ಕೆಲವರು ಆತ್ಮಹತ್ಯೆ ಪ್ರಯತ್ನ ಮಾಡುತ್ತಾರೆ. ಇವರ ಕಷ್ಟ ಅರಿಯದವರಂತೆ ಸಚಿವರು ಹೇಳಿಕೆ ನೀಡಿರುವುದು ನಿಜಕ್ಕೂ ದುರದೃಷ್ಟಕರ ಎಂದು ಕಾಂಗ್ರೆಸ್ ನಾಯಕ ತೊಮ್ ವಡಕ್ಕನ್ ಆರೋಪಿಸಿದ್ದಾರೆ.
ವೆಂಕಯ್ಯ ನಾಯ್ಡು ಅವರ ಹೇಳಿಕೆ ನಿಜಕ್ಕೂ ದುರದೃಷ್ಟಕರ. ಮಧ್ಯಪ್ರದೇಶದಲ್ಲಿ ಮೃತಪಟ್ಟ ರೈತರ ಬಗ್ಗೆ ಅವರು ಮಾತನಾಡಿದ್ದಾರೆ. ರೈತರು ಸಾಯುವುದರಲ್ಲಿ ಫ್ಯಾಶನ್ ಏನು ಬಂತು? ಸಾಲ ಮನ್ನಾ ಮಾಡುವ ಮೂಲಕ ರೈತರನ್ನು ಕಾಪಾಡಬಹುದು. ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಹುದು. ವೆಂಕಯ್ಯ ನಾಯ್ಡು ಅವರು ರೈತರ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದಾರೆ.
ಸಚಿವರಿಗೆ ಛೀಮಾರಿ ಹಾಕಿದ ಶಿವಸೇನೆ: ಇನ್ನೊಂದೆಡೆ ಬಿಜೆಪಿಯ ಮೈತ್ರಿಕೂಟವಾದ ಶಿವಸೇನೆ ಕೂಡ ವೆಂಕಯ್ಯ ನಾಯ್ಡು ಅವರ ಹೇಳಿಕೆಯನ್ನು ಖಂಡಿಸಿದೆ. ಸಾಲಮನ್ನಾ ಮಾಡುವುದು ಫ್ಯಾಶನ್ ಆಗಿದೆ ಎಂಬ ಸಚಿವರ ಹೇಳಿಕೆ ಅವಮಾನ ಮತ್ತು ದುರದೃಷ್ಟಕರ ಎಂದು ಶಿವಸೇನೆ ಟೀಕಿಸಿದೆ.
ಈ ಹೇಳಿಕೆ ನೀಡುವ ಮುನ್ನ ಸಚಿವ ನಾಯ್ಡು ಅವರು ಫ್ಯಾಶನ್ ಶೋದಲ್ಲಿ ಭಾಗವಹಿಸಿದ್ದರೇ? ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತಾವು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ಅವರಿಗೆ ಸಿಗುತ್ತಿಲ್ಲ. ಸರಿಯಾದ ವೇತನವಿಲ್ಲ. ಹೀಗಾಗಿ ಸಾಲಬಾಧೆಯನ್ನು ತಪ್ಪಿಸಲು ಸಾಲ ಮನ್ನಾ ಮಾಡುವಂತೆ ಕೇಳಿಕೊಳ್ಳುತ್ತಾರೆ ಎಂದು ಶಿವಸೇನಾ ನಾಯಕ ಮತ್ತು ಸಾರಿಗೆ ಸಚಿವ ದಿವಾಕರ್ ರಾವೊಟೆ ಮುಂಬೈಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹಿರಿಯ ನಾಯಕರಾದಂತಹ ವೆಂಕಯ್ಯ ನಾಯ್ಡುರವರು ಇಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos