ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಉಳಿದಿರುವಾಗಲೇ ಭಾನುವಾರ ಕೇಂದ್ರ ಸಂಪುಟ ಪುನಾರಚನೆ ನಡೆಸಲು ಮೋದಿ ಅಂಡ್ ಟೀಮ್ ಸಿದ್ದತೆ ನಡೆಸಿದೆ.
ಈಗಾಗಲೇ 7 ಸಚಿವರು ತಮ್ಮ ರಾಜಿನಾಮೆ ಸಲ್ಲಿಸಿದ್ದಾರೆ, ಈ ಪಟ್ಟಿಗೆ ಬಂಡಾರು ದತ್ತಾತ್ರೇಯ ಹೆಸರು ಸೇರ್ಪಡೆಯಾಗಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ತಂಡವನ್ನು ಮತ್ತಷ್ಟು ಸಮರ್ಥವಾಗಿ ಸಜ್ಜುಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಕರ್ನಾಟಕ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಹಿಮಾಚಲ ಪ್ರದೇಶಗಳಲ್ಲಿ ವಿಧಾನಸಭೆ ಚುನಾವಣೆ ಇರುವ ಕಾರಣ ಎಲ್ಲಾ ರಾಜ್ಯಗಳ ಪ್ರಾತಿನಿಧ್ಯವನ್ನು ಸಮತೋಲನಗೊಳಿಸಲು ಅಮಿತ್ ಶಾ ಪ್ರಯತ್ನ ನಡೆಸಿದ್ದಾರೆ.
ಪ್ರಧಾನಿ ಮೋದಿ ಬ್ರಿಕ್ಸ್ ಸಮಾವೇಶಕ್ಕೆ ಚೀನಾಗೆ ತೆರಳುವ ಮುನ್ನ ಭಾನುವಾರ ಬೆಳಗ್ಗೆ ಸಂಪುಟ ಪುನಾರಚನೆ ನಡೆಯಲಿದೆ, ಎಐಎಡಿಎಂಕೆ ಸಂಪುಟ ಪುನಾರಚನೆ ಕಾರ್ಯಕ್ರಮದಿಂದ ದೂರ ಉಳಿಯಲಿದೆ ಎನ್ನಲಾಗಿದೆ.
ಸಚಿವರಾಗಿ ಉತ್ತಮ ಕಾರ್ಯ ಕ್ಷಮತೆ ಪ್ರದರ್ಶಿಸದ ಹಿನ್ನೆಲೆಯಲ್ಲಿ ಬಂಡಾರು ದತ್ತಾತ್ರೇಯ, ರಾಜೀವ್ ಪ್ರತಾಪ್ ರುಡಿ, ಫಗ್ಗಾನ್ ಸಿಂಗ್ ಕುಲಾಸ್ತೆ, ಸಂಜೀವ್ ಬಾಲ್ಯಾನ್, ಉಮಾಭಾರತಿ ಹಾಗೂ ವಯಸ್ಸಿನ ಹಿತದೃಷ್ಟಿಯಿಂದ ಕಲ್ರಾಜ್ ಮಿಶ್ರಾ ಮತ್ತು ಮಹೇಂದ್ರ ನಾಥ್ ಪಾಂಡೆ ಅವರ ರಾಜಿನಾಮೆ ಪಡೆದು ಕೊಳ್ಳಲಾಗುತ್ತಿದೆ.
ಪ್ರಹ್ಲಾದ್ ಪಟೇಲ್, ಶಿವಸೇನೆಯ ಆನಂದ ರಾವ್ ಅದ್ಸುಲ್, ಸತ್ಯಪಾಲ್ ಸಿಂಗ್, ಜೆಡಿಯುನ ವಶಿಷ್ಟ ನಾರಾಯಣ, ಹಿಮಂತ ಬಿಸ್ವಾ ಶರ್ಮಾ, ಪ್ರಹ್ಲಾದ್ ಜೋಶಿ ಅವರ ಹೆಸರುಗಳು ಹೊಸದಾಗಿ ಸಂಪುಟ ಸೇರುವ ಸಾಧ್ಯತೆ ಪಟ್ಟಿಯಲ್ಲಿದೆ.
ಇದರ ಜೊತೆಗೆ ವಿ.ಕೆ ಗಿರಿಸಿಂಗ್, ಅನಂತ್ ಕುಮಾರ್ ಮತ್ತು ಧರ್ಮೇಂದ್ರ ಪ್ರಧಾನ್ ಅವರುಗಳಿಗೆ ಮತ್ತಷ್ಟು ಹೆಚ್ಚಿನ ಹೊಣೆಗಾರಿಕೆ ನೀಡುವ ಸಾಧ್ಯತೆಯಿದೆ.
ಗುರುವಾರ ಸಂಜೆಯಿಂದಲೇ ಸಚಿವರುಗಳ ರಾಜಿನಾಮೆ ಪರ್ವ ಆರಂಭವಾಗಿದೆ, ಭಾನುವಾರ ಬೆಳಗ್ಗಿನವರೆಗೆ ಮತ್ತಷ್ಟು ಸಚಿವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಯಿದೆ. ಅಮಿತ್ ಶಾ ವೃಂದಾವನದಲ್ಲಿ ನಡೆಯುವ ಆರ್ ಎಸ್ ಎಸ್ ಸಭೆಗೆ ಹಾಜರಾಗಲಿದ್ದಾರೆ.
ಮೋದಿ ಸಂಪುಟದಿಂದ 7 ಸಚಿವರಿಗೆ ಕೊಕ್ ಸಾಧ್ಯತೆ
ತಮ್ಮ ಖಾತೆಯನ್ನು ಸರಿಯಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಬಂಡಾರು ದತ್ತಾತ್ರೇಯ, ಉಮಾ ಭಾರತಿ, ರಾಜೀವ್ ಪ್ರತಾಪ್ ರೂಡಿ, ಫಗ್ಗನ್ ಸಿಂಗ್ ಕುಲಸ್ತೆ ಹಾಗೂ ಸಂಜೀವ್ ಬಲ್ಯಾನ್ ಅವರಿಗೆ ಕೊಕ್ ನೀಡಿದರೆ, ಪಕ್ಷದ ಕಾರ್ಯಕ್ಕಾಗಿ ಮಹೇಂದ್ರ ನಾಥ್ ಪಾಂಡೆ ಮತ್ತು ವಯಸ್ಸಿನ ಕಾರಣದಿಂದ ಕಲರಾಜ್ ಮಿಶ್ರಾ ಅವರಿಗೆ ಕೊಕ್ ನೀಡಲಾಗುತ್ತಿದೆ ಎನ್ನಲಾಗಿದೆ.
ಮೋದಿ ಸಂಪುಟಕ್ಕೆ ಹೊಸದಾಗಿ 6 ಮಂದಿ ಸೇರ್ಪಡೆ ಸಾಧ್ಯತೆ
ಕರ್ನಾಟಕದ ಪ್ರಹ್ಲಾದ್ ಜೋಶಿ, ಪ್ರಹ್ಲಾದ್ ಪಟೇಲ್, ಆನಂದ್ ರಾವ್(ಶಿವಸೇನೆ), ಸತ್ಯಪಾಲ್ ಸಿಂಗ್, ವಶಿಷ್ಠ ನಾರಾಯಣ ಸಿಂಗ್(ಜೆಡಿಯು) ಹಾಗೂ ಹಿಮಂತ್ ಬಿಸ್ವಾ ಶರ್ಮಾ ಅವರು ಹೊಸದಾಗಿ ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಬಡ್ತಿ ಪಡೆಯುವ ಸಚಿವರು?
ಕೇಂದ್ರ ಸಚಿವರಾದ ಆನಂತ್ ಕುಮಾರ್, ಜನರಲ್ ವಿಕೆ ಸಿಂಗ್, ಧರ್ಮೇಂದ್ರ ಪ್ರಧಾನ್ ಅವರಿಗೆ ಬಡ್ತಿ ನೀಡುವ ಸಾಧ್ಯತೆ ಇದೆ.
ಹಿಂಬಡ್ತಿ ಪಡೆಯುವ ಸಚಿವರು?
ರಾಧಾ ಮೋಹನ್ ಸಿಂಗ್, ಹರ್ಷವರ್ಧನ್ ಹಾಗೂ ಸುರೇಶ್ ಪ್ರಭು ಅವರಿಗೆ ಹಿಂಬಡ್ತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos