ಪಾಲ್ಗರ್ , ನವದೆಹಲಿ, ಟೊಕಿಯೋ : ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮಹತ್ವಾಕಾಂಕ್ಷಿಯ ಬುಲೆಟ್ ರೈಲು ಯೋಜನೆಗೆ ಆರಂಭಿಕ ವಿಘ್ನ ಎದುರಾಗಿದೆ.ಜಪಾನ್ ಸಹಯೋಗದಲ್ಲಿ 17 ಮಿಲಿಯನ್ ಡಾಲರ್ ವೆಚ್ಚದ ಬುಲೆಟ್ ರೈಲು ಯೋಜನೆ ಭೂ ಸ್ವಾಧೀನಕ್ಕೆ ಹಣ್ಣು ಬೆಳೆಗಾರರಿಂದ ಪ್ರತಿಭಟನೆ ಎದುರಾಗಿದ್ದು, ಈ ಯೋಜನೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯನ್ನು ಪ್ರತಿ ವಾರವೂ ಪ್ರಧಾನಮಂತ್ರಿ ಕಾರ್ಯಾಲಯವೇ ಮೇಲ್ವಿಚಾರಣೆ ನಡೆಸುತ್ತಿದೆ. ಪ್ರತಿರೋಧ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸಪೋಟ ಹಾಗೂ ಮಾವು ಬೆಳೆಗಾರರೊಂದಿಗೆ ಮಾತುಕತೆ ನಡೆಸುವುದಾಗಿ ಭಾರತೀಯ ಅಧಿಕಾರಿಗಳು ಟೊಕಿಯೋಗೆ ಮತ್ತೆ ಭರವಸೆ ನೀಡಿದ್ದಾರೆ.
ಮೋದಿ ತವರು ರಾಜ್ಯ ಗುಜರಾತಿನ ಅಹಮದಾಬಾದ್ ನಿಂದ ವಾಣಿಜ್ಯ ನಗರಿ ಮುಂಬೈವರೆಗೂ ಸುಮಾರು 508 ಕಿಲೋ ಮೀಟರ್ ದೂರ ಸಾಗುವ ಬುಲೇಟ್ ರೈಲು ಯೋಜನೆ ವಿರೋಧಿಸಿ ನಡೆಯುತ್ತಿರುವ ಹಣ್ಣು ಬೆಳೆಗಾರರ ಪ್ರತಿಭಟನೆಗೆ ಸ್ಥಳೀಯ ರಾಜಕಾರಣಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೂವತ್ತು ವರ್ಷಗಳಿಂದ ಶ್ರಮಪಟ್ಟು ತೋಟಗಾರಿಕಾ ಜಮೀನಾಗಿ ಅಭಿವೃದ್ದಿಪಡಿಸಿದ್ದೇನೆ. ಈಗ ಭೂಮಿ ಕೊಡಿ ಎಂದು ಕೇಳುತ್ತಿದ್ದಾರೆ. ನನ್ನ ಮಕ್ಕಳಿಗಾಗಿ ಈ ತೋಟ ಮಾಡಿದ್ದು, ಯಾವುದೇ ಯೋಜನೆಗೂ ಭೂಮಿ ಕೊಡುವುದಿಲ್ಲ ಎಂದು 62 ವರ್ಷದ ಸಪೋಟ ಬೆಳೆಗಾರರ ದಶರಥ ಪುರವ್ ಕಡ್ಡಿ ಮುರಿದಂತೆ ಹೇಳುತ್ತಾರೆ.
ಯಾವುದೇ ಯೋಜನೆಯ ಭೂ ಸ್ವಾಧೀನಕ್ಕೂ ಭಾರತದಲ್ಲಿ ಅಡ್ಡಿ ಸಾಮಾನ್ಯ ಎನ್ನುವ ರಾಷ್ಟ್ರೀಯ ಹೈ ಸ್ಪೀಡ್ ರೈಲು ಕಾರ್ಪೋರೇಷನ್ ನಿಗಮ ವಕ್ತಾರ್ ಧನಂಜಯ್ ಕುಮಾರ್ , ಸಾಕಷ್ಟು ಪ್ರತಿರೋಧದ ಹಿನ್ನೆಲೆಯಲ್ಲಿ ತೊಂದರೆ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಬುಲೆಟ್ ರೈಲು ಯೋಜನೆಗೆ ಅಗತ್ಯ ಭೂಮಿ ಸಂಗ್ರಹದಲ್ಲಿ ವೈಫಲ್ಯ ಹಿನ್ನೆಲೆಯಲ್ಲಿ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿ ನೀಡುವ ಕಿರು ಸಾಲವೂ ವಿಳಂಬವಾಗುವ ಸಾಧ್ಯತೆ ಇದ್ದು, ಮುಂದಿನ ತಿಂಗಳು ಯೋಜನೆ ಬಗ್ಗೆ ಪರಾಮರ್ಶೆ ನಡೆಸುತ್ತಿದೆ ಎಂದು ಭಾರತೀಯ ರೈಲ್ವೆಯ ಇಬ್ಬರು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ರೈಲು ಯೋಜನೆಯ ಮುಖ್ಯ ಹಂತಕ್ಕೆ ಸಾಲ ಒಪ್ಪಂದ ಮಾಡಿಕೊಂಡಿದ್ದು, ಸ್ಥಳೀಯ ನಿವಾಸಿಗರು ಹಾಗೂ ಸಾರ್ವಜನಿಕರಿಗಾಗಿ ಯೋಜನೆಗಾಗಿ ಭಾರತ ಸ್ಥಳವನ್ನು ಮರು ಪರಿಶೀಲಿಸಬೇಕಾಗಿದೆ ಎಂದು ಜೈಕಾ ವಕ್ತಾರರು ಹೇಳಿದ್ದಾರೆ.
ಪರಿಸರ ಹಾಗೂ ಸಾಮಾಜಿಕ ಅಂಶಗಳ ಪರಿಗಣೆಗಾಗಿ ಜೈಕಾದ ಮಾರ್ಗಸೂತ್ರಗಳನ್ನು ಭಾರತ ಎಚ್ಚರಿಕೆಯಿಂದ ಪಾಲಿಸಬೇಕಾಗುತ್ತದೆ. ಇದು ಸಾಧ್ಯವಾಗಲಿದ್ದು, ಸ್ವಲ್ಪ ದಿನ ಹಿಡಿಯುತ್ತದೆ ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ ದಿನಾಚರಣೆಯ 75 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 2022 ರೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಭಾರತ ಬಯಸಿದ್ದು, ಟೊಕಿಯೋದಲ್ಲಿ ಇದೇ ತಿಂಗಳು ಭಾರತೀಯ ಅಧಿಕಾರಿಗಳು ಅಲ್ಲಿನ ಸಾರಿಗೆ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಬುಲೆಟ್ ರೈಲು ಯೋಜನೆಗಾಗಿ 50 ವರ್ಷದ ಸಾಲದ ಮೂಲಕ ಜಪಾನ್ ಹೆಚ್ಚಿನ ಹಣ ನೀಡುತ್ತಿದೆ. ನಿಪಾನ್ ಸ್ಟಿಲ್ ಮತ್ತು ಸುಮಿಟೊಮೊ ಮಿತ್ತಲ್ ಕಾರ್ಪೋರೇಷನ್, ಜೆಎಫ್ ಇ ಹೊಲ್ಡಿಂಗ್ಸ್, ತೊಷಿಬಾ, ಹಿಟಾಚಿ ಮತ್ತಿತರ ಕಂಪನಿಗಳು ಶೇ,70 ರಷ್ಟು ರೈಲು ಹಳಿಗಳಿಗೆ ಸಂಬಂಧಿಸಿದ ಉಪಕರಣಗಳನ್ನು ಪೂರೈಕೆ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.
ಮೇಕ್ ಇನ್ ಇಂಡಿಯಾ ಯೋಜನೆ ಯಡಿ ಈ ಯೋಜನೆ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ. ಭಾರತದಲ್ಲಿಯೇ 2 ಟ್ರಿಲಿಯನ್ ಡಾಲರ್ ಆರ್ಥಿಕ ಉತ್ಪಾದನೆಯ ಗುರಿ ಹೊಂದಲಾಗಿದ್ದು, ಯೋಜನೆ ಮೂಲಕ ಸಾವಿರಾರು ಉದ್ಯೋಗ ಸೃಷ್ಟಿಯ ಬಗ್ಗೆ ಭಾರತ ಸರ್ಕಾರ ಭರವಸೆ ಹೊಂದಿದೆ.
ಈ ಯೋಜನೆಯಿಂದ ರೈತರ ಬದುಕು ದುಸ್ತರವಾಗಲ್ಲ ಎಂದು ಭಾರತೀಯ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಾನಿ ಲೊಹಾನಿ ಹೇಳಿದ್ದಾರೆ. ಸ್ವಾಧೀನಪಡಿಸಿಕೊಂಡ ಭೂಮಿಗೆ ಮಾರ್ಕೆಟ್ ದರದಲ್ಲಿ ಶೇ. 25 ರಷ್ಟು ಪ್ರಿಮಿಯಂ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆ ದರಕ್ಕಿಂತ ಶೇ.50 ರಷ್ಟು ಅಂದರೆ 5 ಲಕ್ಷ ರೂಪಾಯಿ ನೀಡುವಂತೆಯೂ ರೈತರು ಕೇಳುತ್ತಿದ್ದಾರೆ.
ಆದಾಗ್ಯೂ, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾಲ್ಗರ್ ನ ಸ್ಥಳೀಯ ವಿರೋಧ ಪಕ್ಷಗಳ ಮುಖಂಡರು , ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬುಲೆಟ್ ರೈಲು ಯೋಜನೆಯಿಂದ ಹಣ ಪೋಲಾಗಲಿದ್ದು, ರೈತರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಹೇಳುತ್ತಿದ್ದಾರೆ.
ಮುಂದಿನ ವಾರ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಶಿವಸೇನಾ ವಕ್ತಾರ ನಿಲಂ ಗೊರ್ಹೆ ಹೇಳಿದ್ದಾರೆ.