ಜೈಪುರ: ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಎದುರಾಗಿದ್ದು ಸರ್ಕಾರವನ್ನು ಪತನದ ಅಂಚಿಗೆ ಕೊಂಡೊಯ್ದಿದೆ. ಈ ಬೆನ್ನಲ್ಲೇ ನಡೆಯುತ್ತಿರುವ ಕಾಂಗ್ರೆಸ್ ಸಿಎಲ್ ಪಿ ಸಭೆ ಕುತೂಹಲ ಮೂಡಿಸಿದ್ದು ಕೆಲವೇ ಗಂಟೆಗಳಲ್ಲಿ ಸ್ಪಷ್ಟ ಚಿತ್ರಣ ಲಭಿಸಲಿದೆ.
ಈ ನಡುವೆ ಸಿಎಲ್ ಪಿ ಸಭೆಗೂ ಮುನ್ನ ಕಾಂಗ್ರೆಸ್, ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದು, "ಸಚಿನ್ ಪೈಲಟ್ ಅವರ ಬೇಡಿಕೆಗಳು, ಮಾತುಗಳನ್ನು ಪರಿಗಣಿಸಲು ಸಿದ್ಧವಿದ್ದೇವೆ. ಆದರೆ ಪಕ್ಷದಲ್ಲಿ ಅಶಿಸ್ತನ್ನು ಸಹಿಸುವುದಿಲ್ಲ ಎಂದು ಹೇಳಿದೆ.
ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ವೀಕ್ಷಕರಾದ ಅಜಯ್ ಮಕೇನ್, ರಣ್ದೀಪ್ ಸುರ್ಜೆವಾಲ ಹಾಗೂ ರಾಜಸ್ಥಾನದ ಎಐಸಿಸಿ ಉಸ್ತುವಾರಿ ಅವಿನಾಶ್ ಪಾಂಡೆ ಸಿಎಲ್ ಪಿ ಸಭೆಯಲ್ಲಿರಲಿದ್ದಾರೆ. ಸಭೆಗೆ ಹಾಜರಾಗಲು ಎಲ್ಲಾ ಶಾಸಕರಿಗೂ ವಿಪ್ ಜಾರಿಗೊಳಿಸಲಾಗಿದ್ದು ಸಭೆಗೆ ಗೈರಾಗಲಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಸಿದೆ.