ದೇಶ

ದಯಮಾಡಿ ನೀವೆಲ್ಲಿದ್ದೀರೋ ಅಲ್ಲೇ ಇರಿ.. ನಾವೇ ಬಾಡಿಗೆ ಕಟ್ಟುತ್ತೇವೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

Srinivasamurthy VN

ನವದೆಹಲಿ: ಲಾಕ್ ಡೌನ್ ನಡುವೆಯೂ ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡುತ್ತಿರುವ ಕಾರ್ಮಿಕರನ್ನು ತಡೆಯುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಹರಸಾಹಸ ಪಡುತ್ತಿದ್ದು, ಕಾರ್ಮಿಕರು ಉಳಿದುಕೊಂಡಿರುವ ಮನೆಗಳ ಬಾಡಿಗೆಯನ್ನು ಸರ್ಕಾರವೇ ಭರಿಸುತ್ತದೆ. ದಯಮಾಡಿ ನೀವು  ಎಲ್ಲಿದ್ದೀರೋ ಅಲ್ಲೇ ಇರಿ ಎಂದು ಮನವಿ ಮಾಡಿಕೊಂಡಿದೆ.

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯಲ್ಲಿ ಕಾರ್ಮಿಕರ ಓಡಾಟ ಅತಿಯಾಗಿದೆ. ನಿಜಕ್ಕೂ ಭೀತಿ ಹುಟ್ಟಿಸುವ ರೀತಿಯಲ್ಲಿ ಕಾರ್ಮಿಕರು ತಮ್ಮ ಊರುಗಳತ್ತ ದೌಡಾಯಿಸಲು ಮುಂದಾಗಿದ್ದಾರೆ. ಆದರೆ ಇದು ನಿಜಕ್ಕೂ  ಅಪಾಯಕಾರಿಯಾದ ನಡೆ. ಏಕಾಏಕಿ ಸಾವಿರಾರು ಕಾರ್ಮಿಕರು ಸಂಚಾರ ನಡೆಸಿದರೆ ವೈರಸ್ ಹರಡುವ ಸಂಭವ ಹೆಚ್ಚಿರುತ್ತದೆ. ಇದರಿಂದ ಇತರರಿಗೂ ತೊಂದರೆ. ಇಡೀ ದೇಶಕ್ಕೆ ತೊಂದರೆ. ಹೀಗಾಗಿ ಕಾರ್ಮಿಕರು ಉಳಿದುಕೊಂಡಿರುವ ಮನೆಗಳಿಗೆ ಸರ್ಕಾರವೇ ಬಾಡಿಗೆ ಭರಿಸುತ್ತದೆ.  ದಯಮಾಡಿ ನೀವು ಎಲ್ಲಿ ಉಳಿದುಕೊಂಡಿದ್ದೀರೋ ಅಲ್ಲಿಯೇ ಉಳಿದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ದೆಹಲಿಗೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳಿಂದ ಕಾರ್ಮಿಕರು ಆಗಮಿಸಿದ್ದರು. ನಾನು ಕೈ ಮುಗಿದು ಕೇಳುತ್ತೇನೆ. ದಯಮಾಡಿ ನೀವೆಲ್ಲಿದ್ದೀರೋ ಅಲ್ಲಿಯೇ ಉಳಿದುಕೊಳ್ಳಿ. ಸಾವಿರಾರು ಕಾರ್ಮಿಕರು ಏಕಕಾಲದಲ್ಲಿ ಸಂಚಾರ ಮಾಡುತ್ತಿದ್ದು, ಇದು  ಅಪಾಯಕ್ಕೆ ಆಹ್ವಾನ ನೀಡಿದಂತೆ. ನಿಮ್ಮಲ್ಲಿ ಕೇವಲ ಮೂವರಿಗೆ ಸೋಂಕು ತಗಲಿದ್ದರೂ ಅವರಿಂದ ಹಲವರಿಗೆ ಸೋಂಕು ತಗಲುವ ಅಪಾಯವಿದೆ. ಕೊರೋನಾ ವಿರುದ್ದ ಹೋರಾಡಲು ಪ್ರಧಾನಿ ಮೋದಿ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ನೀವು ಲಾಕ್ ಡೌನ್ ನಿಯಮ ಪಾಲನೆ  ಮಾಡದಿದ್ದರೆ ದೇಶ ಕೊರೋನಾ ವಿರುದ್ಧ ಹೋರಾಟದಲ್ಲಿ ಸೋಲುತ್ತದೆ. ಈ ಹಿಂದೆ ಚೀನಾ ಮತ್ತು ಇಟಲಿಗಿಂತಲೂ ಧಾರುಣ ಪರಿಸ್ಥಿತಿ ಭಾರತದಲ್ಲಿ ಏದುರಾಗುತ್ತದೆ. ಆಗ ಸರ್ಕಾರ ಕೂಡ ಏನೂ ಮಾಡಲಾಗದ ಪರಿಸ್ಥಿತಿ ಬರುತ್ತದೆ. ದಯಮಾಡಿ ಆ ಪರಿಸ್ಥಿತಿ ತರಬೇಡಿ ಎಂದು ಕೇಜ್ರಿವಾಲ್  ಮನವಿ ಮಾಡಿದ್ದಾರೆ.

SCROLL FOR NEXT