ಲಖನೌ: ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕ್ ಗೆಲುವನ್ನು ಸಂಭ್ರಮಿಸಿದವರ ವಿರುದ್ಧ ಉತ್ತರ ಪ್ರದೇಶದಲ್ಲಿ ಜಾಗ ಇರಲ್ಲ ಹಾಗೂ ದೇಶದ್ರೋಹದ ಪ್ರಕರಣ ದಾಖಲಿಸುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.
ಉತ್ತರ ಪ್ರದೇಶದ 5 ಜಿಲ್ಲೆಯ 7 ಆರೋಪಿಗಳು ಪಾಕಿಸ್ತಾನದ ಕ್ರಿಕೆಟ್ ಗೆಲುವನ್ನು ಆಚರಿಸಿದ್ದಾರೆ. ಬದಾಂಯು, ಆಗ್ರಾ, ಬರೇಲಿ, ಸೀತಾಪುರ ಜಿಲ್ಲೆಗಳಲ್ಲಿ ಆರೋಪಿಗಳು ಪಟಾಕಿ ಸಿಡಿಸಿದ್ದಾರಲ್ಲದೆ, ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಇಂಥ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಅವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಅಂತಾ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಸಿಎಂ ಕಚೇರಿ ಅಧಿಕೃತ ಟ್ವಿಟ್ಟರ್ ನಿಂದ ಈ ಬಂಧನದ ಬಗ್ಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಐಸಿಸಿ ಟಿ20 ವಿಶ್ವಕಪ್: ಪಾಕಿಸ್ತಾನ ಗೆಲುವು ಸಂಭ್ರಮಿಸಿದ್ದ ಶಿಕ್ಷಕಿಯನ್ನು ಹುದ್ದೆಯಿಂದ ಕಿತ್ತೊಗೆದ ಶಾಲೆ!
ಪಾಕಿಸ್ತಾನದ ವಿರುದ್ಧ ಭಾರತ ಕಳೆದ ಭಾನುವಾರ ಹೀನಾಯವಾಗಿ ಸೋತಿತ್ತು. ಈ ಸೋಲು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕಣ್ಣೀರು ತರಿಸಿತ್ತು. ಅಲ್ಲದೆ ಇಡೀ ದೇಶಾದ್ಯಂತ ಜನರ ಮೊಗದಲ್ಲಿ ನೋವು ಕಾಣುವಂತೆ ಮಾಡಿತ್ತು.
ಆದರೆ, ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಭಾರತ ವಿರುದ್ಧದ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿತ್ತು. ಇನ್ನೊಂದೆಡೆ ಭಾರತದ ಕೆಲವೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಗಿತ್ತು.