ಶಿವಗಂಗಾ: ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಚನಾಥಂ ಗ್ರಾಮದಲ್ಲಿ 2018ರಲ್ಲಿ ನಡೆದಿದ್ದ ಮೂವರು ದಲಿತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ (ತಡೆಗಟ್ಟುವಿಕೆ ಕಾಯ್ದೆ) ಅಡಿ ವಿಶೇಷ ವಿಚಾರಣೆ ನಡೆಸಿದ ಇಲ್ಲಿನ ವಿಶೇಷ ನ್ಯಾಯಾಲಯ ಶುಕ್ರವಾರ 27 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ವಿಶೇಷ ನ್ಯಾಯಾಲಯ ಆಗಸ್ಟ್ 1 ರಂದು ಎಲ್ಲಾ 27 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ್ದ ವಿಶೇಷ ನ್ಯಾಯಾಲಯ, ಶುಕ್ರವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಅದರಂತೆ ನ್ಯಾಯಾಧೀಶ ಜಿ ಮುತ್ತುಕುಮಾರನ್ ಅವರು ಎಲ್ಲಾ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಮೇ 28, 2018 ರ ರಾತ್ರಿ ಶಿವಗಂಗೈ ಜಿಲ್ಲೆಯ ತಿರುಪ್ಪಚೆಟ್ಟಿ ಸಮೀಪದ ಕಚನಂತಂ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅರುಮುಗಂ (65), ಷಣ್ಮುಗನಾಥನ್ (31) ಮತ್ತು ಚಂದ್ರಶೇಖರ್ (34) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ದೇವಸ್ಥಾನ ಉತ್ಸವದಲ್ಲಿ ಹರಕೆ ತೀರಿಸುವ ವಿಚಾರದಲ್ಲಿ ನಡೆದ ವೈಷಮ್ಯದಲ್ಲಿ ಅವರನ್ನು ಪ್ರಬಲ ಸಮುದಾಯದ ಸದಸ್ಯರು ಹತ್ಯೆ ಮಾಡಿದ್ದರು. ದಾಳಿಯಲ್ಲಿ ಇನ್ನೂ ಐವರು ದಲಿತರಿಗೆ ಗಾಯಗಳಾಗಿವೆ. ಗಾಯಾಳುಗಳ ಪೈಕಿ ಠಾಣಶೇಖರನ್ (32) ಘಟನೆ ನಡೆದು ಒಂದೂವರೆ ವರ್ಷದ ಬಳಿಕ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ದಲಿತಳೆಂಬ ಕಾರಣಕ್ಕೆ ಮನೆಯೊಳಗೆ ಸೇರಿಸುತ್ತಿಲ್ಲ, ಕರ್ತವ್ಯ ಹೇಗೆ ನಿರ್ವಹಿಸಲಿ: ಕಣ್ಣೀರಿಟ್ಟ ಆಶಾ ಕಾರ್ಯಕರ್ತೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 33 ಜನರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಾಲ್ವರು ಆರೋಪಿಗಳು ಅಪ್ರಾಪ್ತರಾಗಿದ್ದರೆ ಅವರಲ್ಲಿ ಇಬ್ಬರು ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ತಲೆಮರೆಸಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.