ದೇಶ

40 ಎಎಪಿ ಶಾಸಕರಿಗೆ ಆಫರ್ ಮಾಡಿದ 800 ಕೋಟಿ ರೂ. ಹಣದ ಮೂಲ ಯಾವುದು?: ಬಿಜೆಪಿಗೆ ಕೇಜ್ರಿವಾಲ್ ಪ್ರಶ್ನೆ

Lingaraj Badiger

ನವದೆಹಲಿ: ಕೇಸರಿ ಪಕ್ಷ ಸೇರಲು 40 ಆಪ್‌ ಶಾಸಕರಿಗೆ ಆಫರ್ ಮಾಡಿದ್ದ 800 ಕೋಟಿ ರೂ.ಗಳ ಮೂಲ ಯಾವುದು? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಗುರುವಾರ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಕೇಜ್ರಿವಾಲ್ ಅವರು ಇಂದು ತಮ್ಮ ನಿವಾಸದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರ ಸಭೆಯ ನಂತರ, ಶಾಸಕರೊಂದಿಗೆ ರಾಜ್‌ಘಾಟ್‌ಗೆ ತೆರಳಿ ಭಾರತೀಯ ಜನತಾ ಪಕ್ಷದ (ಬಿಜೆಪಿ) “ಆಪರೇಷನ್ ಕಮಲ” ವಿಫಲವಾಗಲಿ ಎಂದು ಪ್ರಾರ್ಥಿಸಿದರು.

"ನಮ್ಮ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದಲ್ಲಿ ಹಾಸಿಗೆಗಳು ಮತ್ತು ಗೋಡೆಗಳನ್ನು ಸಹ ಸಿಬಿಐ ಶೋಧಿಸಿದೆ. ಆದರೆ ಲೆಕ್ಕಕ್ಕೆ ಸಿಗದ ಒಂದು ಪೈಸೆ ಕೂಡ ಪತ್ತೆಯಾಗಿಲ್ಲ. ಸಿಬಿಐ ದಾಳಿಯ ಒಂದು ದಿನದ ನಂತರ, ಸಿಸೋಡಿಯಾ ಅವರಿಗೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿ ದ್ರೋಹ ಮಾಡಲು ಬಿಜೆಪಿ ಯತ್ನಿಸಿದೆ. ಆದರೆ ಮುಖ್ಯಮಂತ್ರಿ ಸ್ಥಾನದ ದುರಾಸೆಯಿಲ್ಲದ ಸಿಸೋಡಿಯಾ ಅವರನ್ನು ಪಡೆದಿರುವುದು ನನ್ನ ಅದೃಷ್ಟ,” ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜನರು ದೆಹಲಿಯಲ್ಲಿ "ಹಾರ್ಡ್‌ಕೋರ್ ಪ್ರಾಮಾಣಿಕ" ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಅದು ಅವರಿಗೆ ದ್ರೋಹ ಮಾಡುವುದಿಲ್ಲ ಎಂದು ದೆಹಲಿ ಸಿಎಂ ಹೇಳಿದ್ದಾರೆ.

ನಿನ್ನೆ ದೆಹಲಿ 40 ಎಎಪಿ ಶಾಸಕರಿಗೆ ಪಕ್ಷ ಬದಲಾಯಿಸಿದರೆ ತಲಾ 20 ಕೋಟಿ ರೂಪಾಯಿ ನೀಡವುದಾಗಿ ಆಫರ್ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು. ಇದರ ಬೆನ್ನಲ್ಲೇ ಇಂದು ಕೇಜ್ರಿವಾಲ್ ಅವರ ನಿವಾಸದಲ್ಲಿ ಶಾಸಕರ ಸಭೆ ಕರೆಯಲಾಗಿತ್ತು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೇಜ್ರಿವಾಲ್ ಸೇರಿದಂತೆ 53 ಶಾಸಕರು ಭೌತಿಕವಾಗಿ ಭಾಗವಹಿಸಿದ್ದರು.

ಸಚಿವ ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದು, ಇತರ ಏಳು ಶಾಸಕರು ದೆಹಲಿಯಿಂದ ಹೊರಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

SCROLL FOR NEXT