ನವದೆಹಲಿ: ದೇಶಾದ್ಯಂತ ಬಿಜೆಪಿ ವಿರುದ್ಧ ದೊಡ್ಡ ಮಟ್ಟದ ಮೌನ ಅಲೆ. ಜನ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಶನಿವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಗೆ ಪರ್ಯಾಯವಾಗುವ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಪ್ರತಿಪಕ್ಷಗಳು ಒಂದಾಗಬೇಕು. ಭಾರತ್ ಜೋಡೋ ಯಾತ್ರೆಯು ಜನರಿಗೆ ಹೊಸ ರೀತಿಯ ಕೆಲಸ ಮತ್ತು ಚಿಂತನೆಯನ್ನು ಪ್ರಸ್ತುತಪಡಿಸಲು ಚೌಕಟ್ಟನ್ನು ಒದಗಿಸಿದೆ ಎಂದು ಹೇಳಿದರು.
ಇದನ್ನು ಓದಿ: ಬಿಜೆಪಿ ನನ್ನ 'ಗುರು' ಎಂದು ಭಾವಿಸುತ್ತೇನೆ, ದೆಹಲಿಯ ಚಳಿಗೆ ಶ್ವೆಟರ್ ಹಾಕದಿರುವ ಗುಟ್ಟನ್ನು ವಿಡಿಯೊ ಮಾಡಿ ಹೇಳುತ್ತೇನೆ: ರಾಹುಲ್ ಗಾಂಧಿ
ದೇಶದ ರಾಜಕೀಯದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸುತ್ತಿರುವ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ನಾಯಕರು ಮತ್ತು ಕಾಂಗ್ರೆಸ್ ನಡುವೆ ಪರಸ್ಪರ ಗೌರವಿಸಲು ತಾವು ಬಯಸುವುದಾಗಿ ರಾಹುಲ್ ಗಾಂಧಿ ತಿಳಿಸಿದರು.
"ಪ್ರತಿಪಕ್ಷಗಳು ದೂರದೃಷ್ಟಿಯೊಂದಿಗೆ ಪರಿಣಾಮಕಾರಿಯಾಗಿ ಒಗ್ಗಟ್ಟಾಗಿ ನಿಂತರೆ, ಬಿಜೆಪಿಗೆ ಚುನಾವಣೆಯಲ್ಲಿ ಗೆಲ್ಲುವುದು ತುಂಬಾ ಕಷ್ಟವಾಗುತ್ತದೆ. ಆದರೆ ಪ್ರತಿಪಕ್ಷಗಳು ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸಬೇಕು ಮತ್ತು ಪ್ರತಿಪಕ್ಷಗಳು ಪರ್ಯಾಯ ದೃಷ್ಟಿಕೋನದಿಂದ ಜನರ ಬಳಿಗೆ ಹೋಗಬೇಕು" ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು.
ಭಾರತ್ ಜೋಡೋ ಯಾತ್ರೆಯು ದ್ವೇಷದ ವಿರುದ್ಧ ದೇಶವನ್ನು ಒಗ್ಗೂಡಿಸುವ ಗುರಿ ಹೊಂದಿದೆ ಮತ್ತು ಇದು ನಮಗೆ ಯಶಸ್ವಿ ಯಾತ್ರೆಯಾಗಿದೆ. ಯಾತ್ರೆ ಬಹಳಷ್ಟು ಸಾಧಿಸಿದೆ. ನಿರುದ್ಯೋಗ ಸಮಸ್ಯೆಗಳು ಮತ್ತು ಬೆಲೆ ಏರಿಕೆಯ ಸಮಸ್ಯೆಗಳು ದೇಶದಲ್ಲಿ ವ್ಯಾಪಕವಾಗಿದೆ. ಈ ಕುರಿತ ಯಾತ್ರೆ ಅರಿವು ಮೂಡಿಸಿದೆ ಎಂದು ಅವರು ಹೇಳಿದರು.