ಮುಂಬೈ: ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಪಾಳಯದಲ್ಲಿರುವ ಮಹಾರಾಷ್ಟ್ರದ ಸಚಿವರು ಇನ್ನು 24 ಗಂಟೆಗಳಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಶನಿವಾರ ಹೇಳಿದ್ದಾರೆ.
ಹಿಂದಿನ ದಿನ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ಹಿರಿಯ ಕ್ಯಾಬಿನೆಟ್ ಸಚಿವರಾದ ಶಿಂಧೆ ನೇತೃತ್ವದ ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಸೇನಾ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಅಧಿಕಾರ ನೀಡಿತ್ತು.
ಇದನ್ನು ಓದಿ: ಮಹಾ ರಾಜಕೀಯ ಬಿಕ್ಕಟ್ಟು: ಅನರ್ಹತೆ ಅರ್ಜಿಗೆ ಸೋಮವಾರದೊಳಗೆ ಉತ್ತರಿಸುವಂತೆ ಶಿವಸೇನೆ ಬಂಡಾಯ ಶಾಸಕರಿಗೆ ಸಮನ್ಸ್
ಇಂದು ಸಂಜೆ ಮರಾಠಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ರಾವತ್, "ಬಂಡಾಯ ಸಚಿವರನ್ನು ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿದೆ" ಎಂದು ಹೇಳಿದರು. "ಗುಲಾಬ್ರಾವ್ ಪಾಟೀಲ್, ದಾದಾ ಭೂಸೆ, ಸಂದೀಪನ್ ಬುಮ್ರೆ ಅವರಂತಹ ಸಚಿವರನ್ನು ಶಿವಸೇನೆ ನಿಷ್ಠಾವಂತ ಕಾರ್ಯಕರ್ತರು ಎಂದು ಪರಿಗಣಿಸಲಾಗಿತ್ತು. ಅವರನ್ನು ಉದ್ಧವ್ ಠಾಕ್ರೆ ಅವರು ಕ್ಯಾಬಿನೆಟ್ ಮಂತ್ರಿಯನ್ನಾಗಿ ಮಾಡಿದರು ... ಪಕ್ಷವು ಅವರಿಗೆ ಸಾಕಷ್ಟು ನೀಡಿದೆ. ಆದರೆ ಅವರು ತಪ್ಪು ದಾರಿ ಹಿಡಿದಿದ್ದಾರೆ ಮತ್ತು ಅವರು 24 ಗಂಟೆಗಳಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ" ಎಂದು ಹೇಳಿದರು.
ಶಂಭುರಾಜ್ ದೇಸಾಯಿ, ಅಬ್ದುಲ್ ಸತ್ತಾರ್ ಮತ್ತು ಬಚ್ಚು ಕಾಡು ಅವರು ಬಂಡಾಯ ಪಾಳಯದಲ್ಲಿರುವ ಇತರ ಸಚಿವರಾಗಿದ್ದಾರೆ. ಕಾಡು ಅವರು ಸೇನಾ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿರುವ ಪ್ರಹಾರ್ ಜನಶಕ್ತಿ ಪಕ್ಷದ ಮುಖ್ಯಸ್ಥರಾಗಿದ್ದಾರೆ.