ದೇಶ

ಬಿಜೆಪಿಯೇತರ ಸರ್ಕಾರ ಬಂದರೆ ದೇಶಾದ್ಯಂತ ಉಚಿತ ವಿದ್ಯುತ್: ಕೆಸಿಆರ್

Srinivasamurthy VN

ನವದೆಹಲಿ: ರಾಜಕೀಯ ಪಕ್ಷಗಳ 'ಉಚಿತ' ಘೋಷಣೆಗಳ ಕುರಿತು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಸುತ್ತಿರುವಂತೆಯೇ ಇತ್ತ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರು ಮತ್ತೊಂದು ಉಚಿತ ಆಶ್ವಾಸನೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಹೌದು.. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಸೋಮವಾರ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರಕ್ಕೆ ಬಂದರೆ, ದೇಶದ ಎಲ್ಲಾ ರೈತರಿಗೆ "ಉಚಿತ" ವಿದ್ಯುತ್ ಸರಬರಾಜು ಮಾಡುವುದಾಗಿ ಘೋಷಿಸಿದ್ದಾರೆ.

ನಿಜಾಮಾಬಾದ್‍ನಲ್ಲಿ ಸಮಗ್ರ ಜಿಲ್ಲಾ ಕಚೇರಿ ಸಂಕೀರ್ಣ ಹಾಗೂ ಟಿಆರ್‌ಎಸ್ ಪಕ್ಷದ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಸಾರ್ವತ್ರಿಕ ಚುನಾವಣೆಯ ನಂತರ ಭಾರತದಲ್ಲಿ "ಬಿಜೆಪಿಯೇತರ ಧ್ವಜ" ರಾರಾಜಿಸಲಿದೆ. ಕೇಂದ್ರದಲ್ಲಿ ಪ್ರತಿಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್‌ಗಳನ್ನು ಅಳವಡಿಸುವಂತೆ ರೈತರಿಗೆ ಒತ್ತಾಯಿಸುತ್ತಿದೆ. ಆದರೆ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತವಾಗಿಯೇ ವಿದ್ಯುತ್ ನೀಡಲಾಗುತ್ತದೆ ಎಂದು ಹೇಳಿದರು.

2024ರ ಲೋಕಸಭೆ ಚುನಾವಣೆಯ ನಂತರ ಈ ದೇಶದ ಎಲ್ಲ ರೈತರು ಬಿಜೆಪಿಯೇತರ ಬಾವುಟ ಹಾರಿಸಲಿದ್ದಾರೆ. ನಾವು ಈ ಬಡವರ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಮತ್ತು ನಮ್ಮದೇ ಸರ್ಕಾರ ದೆಹಲಿಯಲ್ಲಿ ಕೂಡ (ರಾಷ್ಟ್ರೀಯ ಮಟ್ಟದಲ್ಲಿ) ಅಧಿಕಾರಕ್ಕೆ ಬರಲಿದೆ. ನಾನು ಈ ದೇಶದ ರೈತರಿಗೆ ಸಹಿ ಸುದ್ದಿಯನ್ನು ನೀಡುತ್ತಿದ್ದೇನೆ. ನೀವು ಬಿಜೆಪಿಯೇತರ ಸರ್ಕಾರವನ್ನು ಆರಿಸಿದರೆ, ತೆಲಂಗಾಣದಂತೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ರೈತರು ಸೇರಿದಂತೆ ಎಲ್ಲರಿಗೂ 24/7 ವಿದ್ಯುತ್ ನೀಡುವ ಯಾವುದೇ ರಾಜ್ಯ ಈ ದೇಶದಲ್ಲಿ ಇಲ್ಲ ಮತ್ತು ಪ್ರತಿ ದಲಿತ ಕುಟುಂಬಕ್ಕೆ 10 ಲಕ್ಷ ಆರ್ಥಿಕ ನೆರವು ನೀಡುವ ಏಕೈಕ ರಾಜ್ಯ ತೆಲಂಗಾಣವಾಗಿದೆ ಎಂದು ಹೇಳಿದರು. 

ಜೊತೆಗೆ ಎನ್‍ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ಮೋದಿ ಸರ್ಕಾರವು ಈಗ ರಸಗೊಬ್ಬರ, ಡೀಸೆಲ್ ಮತ್ತು ಇತರ ಇನ್‍ಪುಟ್‍ಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ಕೃಷಿ ಕೆಲಸ ಕಷ್ಟಕರ ಎಂಬಂತೆ ರೈತರಿಗೆ ತೋರಿಸಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ಕೃಷಿ ಭೂಮಿಯನ್ನು ಕಿತ್ತುಕೊಂಡು ಕಾರ್ಪೋರೇಟ್‍ ಕಂಪನಿಗೆ ನೀಡಬಹುದು ಎಂದು ಆರೋಪಿಸಿದರು.  ಅಂತೆಯೇ ಅನುತ್ಪಾದಕ ಆಸ್ತಿ (ಎನ್‍ಪಿಎ) ಹೆಸರಿನಲ್ಲಿ 12 ಲಕ್ಷ ಕೋಟಿ ಮೌಲ್ಯದ ಸಾಲವನ್ನು ಮನ್ನಾ ಮಾಡಿರುವ ಕೇಂದ್ರವು ದೇಶದ ಎಲ್ಲ ರೈತರಿಗೆ 1.45 ಲಕ್ಷ ಕೋಟಿ ವೆಚ್ಚದ ಉಚಿತ ವಿದ್ಯುತ್ ನೀಡಲು ಇಚ್ಛಿಸುತ್ತಿಲ್ಲ ಎಂದು ಕಿಡಿಕಾರಿದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಭರವಸೆ ನೀಡುವ ಉಚಿತ ವಿಚಾರಗಳ ಬಗ್ಗೆ ವ್ಯಾಪಕ ಚರ್ಚೆಯ ಅಗತ್ಯವಿದೆ ಎಂದು ಹೇಳುವ ಸಂದರ್ಭದಲ್ಲಿ ಆಗಸ್ಟ್ 26 ರಂದು ಸುಪ್ರೀಂ ಕೋರ್ಟ್ ಮುಕ್ತಿ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ಉಲ್ಲೇಖಿಸಿದೆ. ರಾಜಕೀಯ ಪಕ್ಷಗಳು ಭರವಸೆ ನೀಡಿದ ಉಚಿತಗಳ ವಿರುದ್ಧದ ಮನವಿಗಳ ಬ್ಯಾಚ್‌ನ ಮೇಲೆ ಸುಪ್ರೀಂ ಕೋರ್ಟ್‌ನ ಆದೇಶ ಬಂದಿದೆ. 
 

SCROLL FOR NEXT