ದೇಶ

ಪಕ್ಷ ತೊರೆದವರ ವಿರುದ್ಧ ಶರದ್ ಪವಾರ್ ಗೆರಿಲ್ಲಾ ಯುದ್ಧ ತಂತ್ರ: ಸಂಜಯ್ ರಾವತ್

Srinivasamurthy VN

ಮುಂಬೈ: ಪಕ್ಷ  ತೊರೆದವರ ವಿರುದ್ಧ ಶರದ್ ಪವಾರ್ ಗೆರಿಲ್ಲಾ ಯುದ್ಧ ತಂತ್ರ ಹೆಣೆಯುತ್ತಿದ್ದಾರೆ ಎಂದು ಶಿವಸೇನೆ(ಯುಬಿಟಿ) ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.

ಶರದ್ ಪವಾರ್ ಮತ್ತು ಅಜಿತ್ ಪವಾರ್ ಭೇಟಿ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಜಯ್ ರಾವತ್, 'ಪಕ್ಷ ಬಿಟ್ಟವರ ವಿರುದ್ಧ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್‌ ಪವಾರ್‌ ಅವರು ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸುತ್ತಿದ್ದಾರೆ. ನಮ್ಮ ಪಕ್ಷವೂ ರಣರಂಗದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದೆ ಎಂದು ಹೇಳಿದರು.

‘ಶರದ್‌ ಪವಾರ್ ಹಾಗೂ ಅವರ ಸಂಗಡಿಗರು ಪಕ್ಷ ಬಿಟ್ಟವರ ವಿರುದ್ಧ ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸುತ್ತಿದ್ದಾರೆ. ಶರದ್‌ ಪವಾರ್‌ ಯಾವತ್ತೂ ಬಿಜೆಪಿ ಜತೆ ಕೈಜೋಡಿಸುವುದಿಲ್ಲ. ಅವರು ಮಹಾ ವಿಕಾಸ್ ಅಘಾಡಿ ಹಾಗೂ ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರು. ಅವರು ಎರಡು ದೋಣಿಗಳ ಮೇಲೆ ಕಾಲಿಟ್ಟಿಲ್ಲ. ಶರದ್‌ ಪವಾರ್‌ ಬಗ್ಗೆ ಯಾರಿಗೂ ಅನುಮಾನ ಇಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಎರಡೂ ಪಕ್ಷಗಳು ಒಡೆದುಹೋಗಿದ್ದರಿಂದ ನಷ್ಟವಾಗಿದೆ ಎನ್ನುವ ವಾದವನ್ನು ಅವರು ತಳ್ಳಿ ಹಾಕಿದ್ದು, ಮುಂದಿನ ಚುನಾವಣೆಯಲ್ಲಿ ಇದಕ್ಕೆ ಸ್ಪಷ್ಟ ಉತ್ತರ ದೊರೆಯಲಿದೆ ಎಂದರು.

ಅಜಿತ್‌ ಪವಾರ್‌ ಹಾಗೂ 8 ಶಾಸಕರು ಜುಲೈ 2 ರಂದು ಏಕನಾಥ ಶಿಂದೆನೇತೃತ್ವದ ಸರ್ಕಾರವನ್ನು ಬೆಂಬಲಿಸಿದ್ದರು. ಅಜಿತ್ ಉಪ ಮುಖ್ಯಮಂತ್ರಿಯಾಗಿಯೂ ಕೆಲ ಶಾಸಕರು ಸಚಿವರಾಗಿಯೂ ಪ್ರಮಾಣವಚನ ಸ್ವೀಕಾರ ಮಾಡಿದ್ದು, ಇದರಿಂದಾಗಿ ಎನ್‌ಸಿಪಿ ಕೂಡ ಶಿವಸೇನೆಯಂತೆ ಇಬ್ಭಾಗವಾಗಿದೆ.

SCROLL FOR NEXT