ಮುಂಬೈ: ಏರ್ ಇಂಡಿಯಾದಲ್ಲಿ ಮತ್ತೊಂದು ವಿಮಾನ ವಿಳಂಬ ಘಟನೆ ಬೆಳಕಿಗೆ ಬಂದಿದ್ದು, ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ತಾಂತ್ರಿಕ ದೋಷದಿಂದ ಬರೊಬ್ಬರಿ 13 ಗಂಟೆ ತಡವಾಗಿ ಪ್ರಯಾಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮುಂಬೈನಿಂದ ನಿನ್ನೆ ಮದ್ಯಾಹ್ನ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ತಾಂತ್ರಿಕ ದೋಷದಿಂದ ಇಂದು ಬೆಳಿಗ್ಗೆ 4 ಗಂಟೆಗೆ ಹೊರಟಿದೆ. ಆದರೆ ವಿಮಾನ ವಿಳಂಬದ ಹಿನ್ನಲೆಯಲ್ಲಿ 170 ಪ್ರಯಾಣಿಕರು 13 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಕಾದು ಪರದಾಡುವಂತಾಗಿತ್ತು.
ಮೂಲಗಳ ಪ್ರಕಾರ, ವಿಮಾನದಲ್ಲಿ ಇಂಜಿನಿಯರಿಂಗ್ ಸಂಬಂಧಿತ ಸಮಸ್ಯೆ ಇತ್ತು ಮತ್ತು ನಿರ್ವಹಣಾ ತಂಡವು ವಿಮಾನವು ಸಂಜೆ 7 ಗಂಟೆಯೊಳಗೆ ಹಾರಾಟಕ್ಕೆ ಸಿದ್ದವಾಗಲಿದೆ ಎಂದು ಹೇಳಿದರೂ ಇಂದು ಮುಂಜಾನೆ ವೇಳೆಗೆ ವಿಮಾನ ಹಾರಾಟಕ್ಕೆ ಸಿದ್ದವಾಯಿತು.
ಮುಂಬೈ ವಿಮಾನ ನಿಲ್ದಾಣದಿಂದ ನಿನ್ನೆ ಮದ್ಯಾಹ್ನ 3 ಗಂಟೆಗೆ ದುಬೈಗೆ ಟೇಕಾಫ್ ಆಗಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಈ ಘಟನೆ ನಡೆದಿದೆ. ವಿಮಾನ ಹಾರಾಟ ವಿಳಂಬದಿಂದ 170 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು. ಲಾಂಜ್ ಸೌಲಭ್ಯ ಸೇರಿದಂತೆ ವಿಶೇಷ ಅವಶ್ಯಕತೆಗಳನ್ನು ಹೊಂದಿರುವ ಸುಮಾರು 50 ಪ್ರಯಾಣಿಕರಿಗೆ ಅಗತ್ಯ ನೆರವು ನೀಡಲಾಗಿದೆ ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರು: ಏರ್ಪೋರ್ಟ್ ಶಟಲ್ ಬಸ್ ಬರಲು ವಿಳಂಬ, ತಾಸುಗಟ್ಟಲೆ ಆಕಾಶ ಏರ್ ವಿಮಾನದಲ್ಲೇ ಕುಳಿತ ಪ್ರಯಾಣಿಕರು!
ಇನ್ನು ಏರ್ ಇಂಡಿಯಾದ ಮಾಲೀಕ ಸಂಸ್ಥೆ ಟಾಟಾ ಗ್ರೂಪ್ ನಗರದಲ್ಲಿ ಕನಿಷ್ಠ ನಾಲ್ಕು ಐಷಾರಾಮಿ ಹೋಟೆಲ್ಗಳನ್ನು ನಿರ್ವಹಿಸುತ್ತದೆ ಮತ್ತು ಒಂದು ದೇಶೀಯ ವಿಮಾನ ನಿಲ್ದಾಣದ ಟರ್ಮಿನಲ್ ಆವರಣದಲ್ಲಿದೆ. ಇದೇ ವಿಚಾರವಾಗಿ ಮಾತನಾಡಿರುವ ಏರ್ ಇಂಡಿಯಾ ಸಂಸ್ಥೆ, 'ನಮ್ಮ ಅತಿಥಿಗಳ ತೊಂದರೆಗಳನ್ನು ಕಡಿಮೆ ಮಾಡಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ, ಎಲ್ಲಾ ಅತಿಥಿಗಳಿಗೆ ಭೋಜನವನ್ನು ನೀಡಲಾಯಿತು, ನಂತರ ನಿರಂತರ ಉಪಹಾರಗಳನ್ನು ನೀಡಲಾಯಿತು. ವಿಶೇಷ ನೆರವು ಮತ್ತು ಬೆಂಬಲದ ಅಗತ್ಯವಿರುವ 50 ಅತಿಥಿಗಳಿಗೆ ಏಪೆರ್ಪೋರ್ಟ್ ಲಾಂಜ್ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.