ಪಾಟ್ನಾ: ಬಿಹಾರದಲ್ಲಿ ನಡೆಸಲಾದ ಜಾತಿ ಆಧಾರಿತ ಸಮೀಕ್ಷೆ 'ನಕಲಿ' ಎಂದು ಕಾಂಗ್ರೆಸ್ ಸಂಸದ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
ಇಂದು ರಾಜ್ಯ ರಾಜಧಾನಿಯಲ್ಲಿ ನಡೆದ 'ಸಂವಿಧಾನ ಸುರಕ್ಷಾ ಸಮ್ಮೇಳನ'(ಸಂವಿಧಾನ ಉಳಿಸಿ ಸಮ್ಮೇಳನ) ದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಯಾವುದೇ ಬೆಲೆ ತೆತ್ತಾದರೂ ರಾಷ್ಟ್ರವ್ಯಾಪಿ ಜಾತಿ ಜನಗಣತಿಯನ್ನು ನಡೆಸುತ್ತದೆ ಎಂದು ಹೇಳಿದರು.
"ನಾವು ರಾಜಕೀಯ ನಷ್ಟವನ್ನು ಅನುಭವಿಸಿಯಾದರೂ ಜಾತಿ ಗಣತಿಯನ್ನು ಖಚಿತಪಡಿಸುತ್ತೇವೆ". ಆದರೆ ಇದು ಬಿಹಾರದಲ್ಲಿ ನಡೆಸಿದ ನಕಲಿ ಜಾತಿ ಸಮೀಕ್ಷೆಯಂತೆ ಆಗುವುದಿಲ್ಲ ಎಂದು ನಿತೀಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಜಾತಿ ಸಮೀಕ್ಷೆಯ ಹೆಸರಿನಲ್ಲಿ ಬಿಹಾರದ ಜನರನ್ನು ಮೂರ್ಖರನ್ನಾಗಿ ಮಾಡಲಾಯಿತು" ಎಂದು ರಾಹುಲ್ ಗಾಂಧಿ, 2022-2023ರಲ್ಲಿ ಬಿಹಾರದಲ್ಲಿ ನಡೆಸಲಾದ ಜಾತಿ ಆಧಾರಿತ ಸಮೀಕ್ಷೆಯನ್ನು ಉಲ್ಲೇಖಿಸಿ ಹೇಳಿದರು.
ದೇಶಾದ್ಯಂತ ಜಾತಿ ಗಣತಿಗೆ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ ರಾಹುಲ್, ದಲಿತ, ಹಿಂದುಳಿದ, ಆದಿವಾಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರ ವಿಶಾಲ ಹಿತಾಸಕ್ತಿಗಾಗಿ ದೇಶಾದ್ಯಂತ ಜನಗಣತಿಯನ್ನು ನಡೆಸುವುದನ್ನು ಅತ್ಯಂತ ಅಗತ್ಯ ಎಂದರು.
ಜಾತಿಗಣತಿ ಪ್ರತಿಯೊಂದು ಜಾತಿಯಲ್ಲೂ ಎಷ್ಟು ಜನಸಂಖ್ಯೆ ಇದೆ ಮತ್ತು ಅಧಿಕಾರಶಾಹಿ, ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಆ ಜಾತಿಯವರು ಎಷ್ಟು ಭಾಗವಹಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಬಜೆಟ್ನಲ್ಲಿ ಹಿಂದುಳಿದ ಸಮುದಾಯದ ಪ್ರಾತಿನಿಧ್ಯವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, “ಕೇಂದ್ರ ಸರ್ಕಾರದ 90 ಹಿರಿಯ ಅಧಿಕಾರಿಗಳು ದೇಶದ ಬಜೆಟ್ನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರಲ್ಲಿ ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಭಾಗವಹಿಸುವಿಕೆ ಶೇ.10ರಷ್ಟು ಕೂಡ ಇಲ್ಲ. ಆದರೆ, ಭಾರತದ ಜನಸಂಖ್ಯೆಯಲ್ಲಿ ಈ ವರ್ಗಗಳ ಪಾಲು ಶೇ.90ರಷ್ಟಿದೆ” ಎಂದರು.