ಗುವಾಹಟಿ: ಮೇಘಾಲಯದ ಬಿಜೆಪಿ ನಾಯಕರೊಬ್ಬರು, ಸೊಹ್ರಾ (ಚಿರಾಪುಂಜಿ) ಪ್ರದೇಶದ ಒಂದು ವೀವ್ ಪಾಯಿಂಟ್ ಗೆ ಹನಿಮೂನ್ ಹೋಗಿದ್ದಾಗ ಪತ್ನಿಯಿಂದ ಹತ್ಯೆಗೀಡಾದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರ ಹೆಸರಿಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬಿಜೆಪಿ ನಾಯಕ ಜೇಮ್ಸ್ ಸೈಮಿಯಾಂಗ್ ಅವರು ಈ ಸಂಬಂಧ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರಿಗೆ ಪತ್ರ ಬರೆದಿದ್ದು, "ರಾಜಾ ಸ್ಮಾರಕ ವೀವ್ ಪಾಯಿಂಟ್", ಸೊಹ್ರಾದಲ್ಲಿ ಪ್ರವಾಸೋದ್ಯಮ ಮತ್ತು ಜಾಗೃತಿಗೆ ಸಾಂಕೇತಿಕ ಹೆಗ್ಗುರುತಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
"... ದುರಂತ ಸಂಭವಿಸಿದ ಸ್ಥಳದಲ್ಲಿ ಅಥವಾ ಅದರ ಹತ್ತಿರ 'ರಾಜಾ ಸ್ಮಾರಕ ವೀವ್ ಪಾಯಿಂಟ್' ಅಭಿವೃದ್ಧಿಯನ್ನು ನಾನು ಪ್ರಸ್ತಾಪಿಸಲು ಬಯಸುತ್ತೇನೆ. ಈ ಸ್ಮಾರಕವು ಸಂತ್ರಸ್ತರ ಮತ್ತು ಅವರ ಕುಟುಂಬಗಳನ್ನು ಗೌರವಿಸುವುದಲ್ಲದೆ, ಗೌರವ ಸಲ್ಲಿಸಲು ಬಯಸುವ ಭಾರತದ ಎಲ್ಲಾ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣವಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಬಿಜೆಪಿ ನಾಯಕ ಪತ್ರದಲ್ಲಿ ಬರೆದಿದ್ದಾರೆ.
ಪ್ರವಾಸಿಗರು ಸುರಕ್ಷತೆ ಮತ್ತು ನ್ಯಾಯದ ಮೌಲ್ಯಗಳಿಗೆ ಬದ್ಧರಾಗಲು 'ಪ್ರತಿಜ್ಞೆ ಗೋಡೆ' ನಿರ್ಮಿಸಬೇಕು ಎಂದು ಸಹ ಬಿಜೆಪಿ ನಾಯಕ ಪ್ರಸ್ತಾಪಿಸಿದ್ದಾರೆ.
"ಈ ಉಪಕ್ರಮವನ್ನು ಮೇಘಾಲಯ ಪ್ರವಾಸೋದ್ಯಮ ಪ್ರಚಾರ ಯೋಜನೆಯ ಅಡಿಯಲ್ಲಿ ಅಥವಾ ಸಿಎಸ್ಆರ್/ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಅಭಿವೃದ್ಧಿಪಡಿಸಬಹುದು ಎಂದು ಜೇಮ್ಸ್ ಸೈಮಿಯಾಂಗ್ ಅವರು ಸಲಹೆ ನೀಡಿದ್ದಾರೆ.
ಆದಾಗ್ಯೂ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷರಾಗಿರುವ ಸೈಮಿಯಾಂಗ್ ಅವರ ಪ್ರಸ್ತಾವನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿದೆ. ಈ ವಿಷಯವನ್ನು ಪಕ್ಷದಲ್ಲಿ ಎಂದಿಗೂ ಚರ್ಚಿಸಿಲ್ಲ ಎಂದು ಬಿಜೆಪಿ ಮೇಘಾಲಯ ಮುಖ್ಯ ವಕ್ತಾರ ಎಂ ಖಾರ್ಕ್ರಾಂಗ್ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಮೇ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಾಜ ರಘುವಂಶಿ ಮತ್ತು ಸೋನಮ್ ದಂಪತಿ ಮೇ 20 ರಂದು ಮೇಘಾಲಯಕ್ಕೆ ಹನಿಮೂನ್ಗೆ ತೆರಳಿದ್ದರು. ಸೋನಮ್ ಹಾಗೂ ಇತರ ನಾಲ್ವರು ರಾಜ ರಘುವಂಶಿ ಅವರನ್ನು ಹತ್ಯೆ ಮಾಡಿದ್ದರು. ಜೂನ್ 2 ರಂದು ರಾಜ ರಘುವಂಶಿ ಅವರ ಶವ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು.