ನವದೆಹಲಿ: ಚರಂಡಿಯಲ್ಲಿ ಇನ್ಶೂರೆನ್ಸ್ ಏಜೆಂಟ್ನ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಫರೀದಾಬಾದ್ ಪೊಲೀಸರು ಬಂಧಿಸಿದ್ದಾರೆ. ಮೃತ ಚಂದರ್ ತನ್ನನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಹೀಗಾಗಿ ಆತನನ್ನು ಕೊಲೆ ಮಾಡಿರುವುದಾಗಿ ಯುವತಿ ಪೊಲೀಸರಿಗೆ ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಚರಂಡಿಯಲ್ಲಿ ಚಂದರ್ ಶವ ಪತ್ತೆಯಾಗಿತ್ತು. ಸಮೀಪದಲ್ಲಿ ನಿಲ್ಲಿಸಿದ್ದ ಬೈಕ್ನ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಶವ ಗುರುತಿಸಲಾಯಿತು. ಫರಿದಾಬಾದ್ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪೂರ್ವ ದೆಹಲಿಯ ವಿನೋದ್ ನಗರದಲ್ಲಿ ಚಂದರ್ ವಾಸಿಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಕುಟುಂಬವನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಮೃತದೇಹದ ತಲೆ ಮತ್ತು ಕುತ್ತಿಗೆಯ ಮೇಲೆ ಗಾಯದ ಗುರುತುಗಳಿದ್ದವು. ಚಂದರ್ ಅವರ ಸಹೋದರ ಮದನ್ ಗೋಪಾಲ್ ನೀಡಿದ ದೂರಿನ ನಂತರ, ಕೊಲೆ ಪ್ರಕರಣ ದಾಖಲಿಸಲಾಯಿತು.
ತನಿಖೆಯ ಸಮಯದಲ್ಲಿ, ಪೊಲೀಸರು ಲಕ್ಷ್ಮಿ (29) ಮತ್ತು ಕೇಶವ್ (26) ಎಂಬುವರನ್ನು ಬಂಧಿಸಿದ್ದಾರೆ. ಚಂದರ್ ತನಗೆ ಐದು ವರ್ಷಗಳಿಂದ ಪರಿಚಯವಿರುವುದಾಗಿ ಲಕ್ಷ್ಮಿ ಪೊಲೀಸರಿಗೆ ಹೇಳಿದ್ದಾಳೆ. ಇತ್ತೀಚೆಗೆ ಕೇಶವ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು.
ಇದರಿಂದ ಚಂದರ್ ಬೇಸರಗೊಂಡಿದ್ದ, ಮದುವೆಯಾಗದಂತೆ ಲಕ್ಷ್ಮಿಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ಈ ಬ್ಲ್ಯಾಕ್ ಮೇಲ್ನಿಂದ ಬೇಸತ್ತ ಆಕೆ ಮತ್ತು ಕೇಶವ್ ಜತೆ ಸೇರಿ ಚಂದರ್ ಅವರನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದಳು ಎಂದು ಪೊಲೀಸ್ ವಕ್ತಾರ ಯಶ್ಪಾಲ್ ಸಿಂಗ್ ತಿಳಿಸಿದ್ದಾರೆ.
ಅಕ್ಟೋಬರ್ 25 ರಂದು, ಲಕ್ಷ್ಮಿ ಚಂದರ್ ಅವರನ್ನು ದೆಹಲಿಯ ಮಿಥಾಪುರಕ್ಕೆ ಕರೆಸಿಕೊಂಡಿದ್ದಳು. ಬೈಕ್ನಲ್ಲಿ ಫರಿದಾಬಾದ್ನ ಆತ್ಮದ್ಪುರದಲ್ಲಿರುವ ನಿರ್ಜನ ಪ್ರದೇಶಕ್ಕೆ ಹೋಗಲು ಕೇಳಿಕೊಂಡರು. ಅಲ್ಲಿ, ಕೇಶವ್ ಮತ್ತು ಅವನ ಇಬ್ಬರು ಸ್ನೇಹಿತರು ಚಂದರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.