ಅಹ್ಮದಾಬಾದ್: ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಮಾಡಿದ ಪೋಸ್ಟ್ ವೊಂದು ಗುಜರಾತ್ ರಾಜ್ಯದಲ್ಲಿ ಹಿಂಸಾಚಾರ ಭುಗಿಲೇಳುವಂತೆ ಮಾಡಿದ್ದು, ಪ್ರಕರಣ ಸಂಬಂಧ ಈ ವರೆಗೂ 60 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ಐ ಲವ್ ಮುಹಮ್ಮದ್’ ಎಂಬ ಪೋಸ್ಟ್ಗೆ ಹಿಂದೂ ವ್ಯಕ್ತಿಯೊಬ್ಬ ‘ಐ ಲವ್ ಮಹಾದೇವ್’ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಇದು ಗಲಭೆಗೆ ಕಾರಣವಾಗಿದೆ.
ಹಿಂದೂ ವ್ಯಕ್ತಿಯೊಬ್ಬ ಹಂಚಿಕೊಂಡ ಪೋಸ್ಟ್ನಿಂದಾಗಿ ಆಕ್ರೋಶಗೊಂಡ ಮುಸ್ಲಿಂ ಸಮುದಾಯದ ಗುಂಪೊಂದು ಗಾಂಧಿನಗರ ಜಿಲ್ಲೆಯ ಬಹಿಯಾಲ್ ಗ್ರಾಮದಲ್ಲಿ ಕಲ್ಲು ತೂರಾಟ ನಡೆಸಿದ್ದು, ಅಂಗಡಿ, ವಾಹನಗಳಿಗೆ ಬೆಂಕಿ ಹಚ್ಚಿ ಗಲಭೆ ನಡೆಸಿದೆ.
ಬುಧವಾರ ರಾತ್ರಿ ಪೋಸ್ಟ್ ಹಂಚಿಕೊಂಡ ಹಿಂದೂ ವ್ಯಕ್ತಿಯ ಅಂಗಡಿಗೆ ನುಗ್ಗಿದ ಕಿಡಿಗೇಡಿಗಳು ವಸ್ತುಗಳನ್ನು ಹೊರಗೆಸೆದು ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಹಿಂದೂಗಳಿರುವ ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ.
ಇದರ ಬೆನ್ನಲ್ಲೇ ಸ್ಥಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಿಯಾಲ್ ಗ್ರಾಮದಿಂದ 60 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ಯ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.