ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವಂತೆಯೇ ಏರ್ ಇಂಡಿಯಾ ಮೇ 31 ರವರೆಗೆ ಇಸ್ರೇಲ್ಗೆ ತನ್ನ ವಿಮಾನಗಳನ್ನು ಸ್ಥಗಿತಗೊಳಿಸಿದೆ. ನವದೆಹಲಿ-ಟೆಲ್ ಅವೀವ್ ಮಾರ್ಗದಲ್ಲಿ ಮೇ 31 ರವರೆಗೆ ವಿಮಾನಯಾನವನ್ನು ಏರ್ ಲೈನ್ಸ್ ಸ್ಥಗಿತಗೊಳಿಸಿದೆ ಎಂದು ಏರ್ ಇಂಡಿಯಾ ಕಾರ್ಯನಿರ್ವಾಹಕರೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ದೃಢಪಡಿಸಿದ್ದಾರೆ.
ಎಲ್ ಅಲ್ (El Al) ಇಸ್ರಾಏರ್, ಅರ್ಕಿಯಾ ಮತ್ತು ಏರ್ ಹೈಫಾದಂತಹ ಇಸ್ರೇಲಿ ವಿಮಾನಗಳು ಮಾತ್ರ ತೀವ್ರ ನಿರ್ಬಂಧಗಳ ಅಡಿಯಲ್ಲಿ ಕಾರ್ಯನಿರ್ವಹಿಸುವುದರೊಂದಿಗೆ ಹೆಚ್ಚಿನ ಪ್ರಮುಖ ವಿಮಾನಯಾನ ಸಂಸ್ಥೆಗಳು ಟೆಲ್ ಅವಿವ್ ಮಾರ್ಗದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.
ವೈಯಕ್ತಿಕ ಅಥವಾ ವೃತ್ತಿಪರ ಕಾರಣಗಳಿಗಾಗಿ ಅಥವಾ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ಪಾರಾಗಲು ಭಾರತಕ್ಕೆ ಬರಲು ಬಯಸುತ್ತಿರುವ ಇಸ್ರೇಲ್ನಲ್ಲಿ ವಾಸಿಸುವ 40,000 ಕ್ಕೂ ಹೆಚ್ಚು ಭಾರತೀಯರಲ್ಲಿ ವಿಮಾನಗಳ ಸ್ಥಗಿತ ಚಿಂತೆಗೀಡು ಮಾಡಿದೆ.
ಇಸ್ರೇಲ್ ತೊರೆಯಲು ಬಯಸುವ ಭಾರತೀಯರು ಜೋರ್ಡಾನ್ ಅಥವಾ ಈಜಿಪ್ಟ್ ಮೂಲಕ ಎರಡು ದೇಶಗಳ ಭೂ ಗಡಿ ದಾಟುವ ಮೂಲಕ ಪ್ರವೇಶಿಸಬೇಕು. ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ವಿವಿಧ ಮಾರ್ಗಗಳ ಮೂಲಕ ಭಾರತಕ್ಕೆ ತೆರಳಲು ನೆರವು ನೀಡುತ್ತಿದೆ. ಇದೇ ವೇಳೆ ರಾಯಭಾರ ಕಚೇರಿ ಭಾರತೀಯ ಸಮುದಾಯದೊಂದಿಗೆ ನಿಯಮಿತ ಸಂಪರ್ಕವನ್ನು ಹೊಂದಿದ್ದು, 24x7 ತುರ್ತು ಸಹಾಯವಾಣಿ ತೆರೆದಿದೆ ಮತ್ತು, ಬೃಹತ್ ನೋಂದಣಿ ಕಾರ್ಯವನ್ನು ಸಹ ಪ್ರಾರಂಭಿಸಿದೆ.
ರಾಯಭಾರಿ ಜೆಪಿ ಸಿಂಗ್ ಮತ್ತು ರಾಯಭಾರ ಕಚೇರಿ ತಂಡ ಶನಿವಾರ ಇಸ್ರೇಲ್ನಾದ್ಯಂತ ಭಾರತೀಯ ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ವರ್ಚುವಲ್ ಚರ್ಚೆಯನ್ನು ನಡೆಸಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತು ಅದರಾಚೆಗೂ ಅವರಿಗೆ ನಿರಂತರ ಬೆಂಬಲದ ಭರವಸೆ ನೀಡಿದೆ ಎಂದು ಮಿಷನ್ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ತಿಳಿಸಿದೆ.
ಸುಧಾರಿತ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವನ್ನು ಬಳಸಿಕೊಂಡು ನಾಲ್ಕು ಸಾಪ್ತಾಹಿಕ ವಿಮಾನಗಳೊಂದಿಗೆ ನವದೆಹಲಿ ಮತ್ತು ಟೆಲ್ ಅವಿವ್ ನಡುವಿನ ನೇರ ವಿಮಾನ ಸೇವೆಯನ್ನು ಜನವರಿ 1 ರಂದು ಮರು-ಪ್ರಾರಂಭಿಸಲಾಯಿತು. ಆದಾಗ್ಯೂ, ಫೆಬ್ರವರಿ 28 ರಂದು US ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದಾಗಿನಿಂದ ವಿಮಾನಗಳು ಅಸ್ತವ್ಯಸ್ತಗೊಂಡಿವೆ.
ಇಸ್ಲಾಮಿಕ್ ಗಣರಾಜ್ಯದ ಪ್ರತೀಕಾರ ಇಡೀ ಗಲ್ಫ್ ಪ್ರದೇಶಕ್ಕೆ ಯುದ್ಧವನ್ನು ವಿಸ್ತರಿಸಿತು. ಈ ಸಂಘರ್ಷವು ಇಂಧನ ಪೂರೈಕೆ ಸರಪಳಿಗಳ ಮೇಲೆ ಪ್ರಮುಖವಾಗಿ ಹಾರ್ಮುಜ್ ಜಲಸಂಧಿ ಬಂದ್ ನಂತಹ ಪ್ರಮುಖ ಸಮಸ್ಯೆಗೆ ಕಾರಣವಾಗಿದೆ.