ಪಲ್ನಾಡು: ಈರುಳ್ಳಿ ಖರೀದಿಗಾಗಿ ರೈತನೋರ್ವ ತಂದಿದ್ದ 5 ಲಕ್ಷ ರೂ ಹಣವನ್ನು ಖತರ್ನಾಕ್ ಕಳ್ಳ ಕದ್ದಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್ಪೇಟೆಯ ಜೊನ್ನಲಗಡ್ಡ ಬೈಪಾಸ್ನಲ್ಲಿರುವ ವೆಂಕಟ ಸತ್ಯನಾರಾಯಣ ಎಂಬ ರೈತ ತನ್ನ ಸ್ಕೂಟರ್ನ ಬಾಕ್ಸ್ ನಲ್ಲಿ ಇಟ್ಟಿದ್ದ 5 ಲಕ್ಷ ರೂ ಹಣವನ್ನು ಕಳವು ಮಾಡಲಾಗಿದೆ.
ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಖತರ್ನಾಕ್ ಕಳ್ಳನ ಕೈಚಳಕ ಸೆರೆಯಾಗಿದೆ.
ಆಗಿದ್ದೇನು?
ರೈತ ಸತ್ಯನಾರಾಯಣ ಈರುಳ್ಳಿ ಖರೀದಿಸಲು ಮಾರುಕಟ್ಟೆಯ ಬಳಿ ತನ್ನ ಸ್ಕೂಟರ್ ನಿಲ್ಲಿಸಿದ್ದ. ಅವರು ಹೊರಗೆ ಹೋದಾಗ, ಫೋನ್ನಲ್ಲಿ ಮಾತನಾಡುವಂತೆ ನಟಿಸುತ್ತಾ ಬಂದ ಕಳ್ಳನೊಬ್ಬ ವಾಹನದ ಬಳಿ ಬಂದು, ಕಂಪಾರ್ಟ್ಮೆಂಟ್ ತೆರೆದು, ಯಾರಿಗೂ ಅನುಮಾನ ಬಾರದಂತೆ ಹಣವನ್ನು ದೋಚಿ ಪರಾರಿಯಾಗಿದ್ದಾನೆ.
ಬಳಿಕ ಹಣ ತೆಗೆಯಲು ಬಂದ ರೈತ ದ್ವಿಚಕ್ರವಾಹನದ ಢಿಕ್ಕಿ ತೆರೆದು ನೋಡಿದಾಗ ಹಣ ನಾಪತ್ತೆಯಾಗಿರುವುದು ತಿಳಿದಿದೆ. ಕೂಡಲೇ ರೈತ ಪೊಲೀಸರಿಗೆ ಮಾಹಿತಿ ನೀಡಿ ದೂರು ನೀಡಿದ್ದಾರೆ. ದೂರಿನಲ್ಲಿ ರೈತ ತಾನು ಈರುಳ್ಳಿ ಖರೀದಿಗೆ 5ಲಕ್ಷ ರೂ ಹಣವನ್ನು ಸಾಲ ತಂದಿದ್ದೆ ಎಂದು ಹೇಳಿಕೊಂಡಿದ್ದಾರೆ.
ರೈತ ನೀಡಿದ ದೂರಿನ ಆಧಾರದ ಮೇಲೆ, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಶಂಕಿತನನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಕಳ್ಳನು ರೈತನನ್ನು ನಗದು ಸಮೇತ ನೋಡಿದ ನಂತರ ಹಿಂಬಾಲಿಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಅಂತೆಯೇ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಸಲಹೆಯನ್ನು ನೀಡಿದ್ದು, ನಾಗರಿಕರು ವಾಹನ ಸಂಗ್ರಹ ವಿಭಾಗಗಳಲ್ಲಿ, ವಿಶೇಷವಾಗಿ ಜನನಿಬಿಡ ಸಾರ್ವಜನಿಕ ಪ್ರದೇಶಗಳಲ್ಲಿ ಅಥವಾ ಬ್ಯಾಂಕುಗಳ ಬಳಿ ಹೆಚ್ಚಿನ ಪ್ರಮಾಣದ ಹಣವನ್ನು ಗಮನಿಸದೆ ಬಿಡದಂತೆ ಒತ್ತಾಯಿಸಿದ್ದಾರೆ.